ಪತ್ರಕರ್ತರ ಸಮ್ಮೇಳನದ ಲಾಂಛನ ಬಿಡುಗಡೆ
Team Udayavani, Jan 5, 2020, 3:04 AM IST
ಬೆಳ್ತಂಗಡಿ: ವಾಸ್ತವ ವರದಿಗಾರಿಕೆ ಮತ್ತು ಓದುಗರಲ್ಲಿ ಆಸಕ್ತಿ ಮೂಡಿಸುವುದರ ನಡುವೆ ಮಾಧ್ಯಮ ರಂಗವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನ ನಿರ್ವಹಿಸುತ್ತಿದೆ. ಆರ್ಥಿಕ ಪೈಪೋಟಿಗಳನ್ನು ಮೀರಿ ಅದು ಹೊಸ ಪರಿಷ್ಕಾರಗಳೊಂದಿಗೆ ಸಮಾಜ ತಿದ್ದುವ ಕಾಯಕದಲ್ಲಿ ಮುನ್ನಡೆಯುತ್ತಿರುವುದು ಪ್ರಶಂಸನೀಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಧರ್ಮಸ್ಥಳದ ವಸಂತ ಮಹಲ್ನಲ್ಲಿ ಶನಿವಾರ ನಡೆದ ಪತ್ರಕರ್ತರ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಮಂಗಳೂರಿನಲ್ಲಿ ಫೆಬ್ರವರಿಯಲ್ಲಿ ನಡೆಸಲಾಗುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. ಧರ್ಮಸ್ಥಳದಿಂದ ಎರಡು ಪತ್ರಿಕೆಗಳು ಪ್ರಸಾರಗೊಳ್ಳುತ್ತಿರುವುದರಿಂದ ಪತ್ರಿಕೆಯ ಒತ್ತಡ ಮತ್ತು ಜವಾಬ್ದಾರಿಗಳ ಅರಿವು ನನಗಿದೆ. ತಾಳ್ಮೆ, ಸಹನೆಗಳನ್ನು ಸಂಪಾದಿಸಿ ಪ್ರಬುದ್ಧ ವರದಿಗಳನ್ನು ಬಿತ್ತರಿಸುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸೋಣ ಎಂದು ಅವರು ಕರೆ ನೀಡಿದರು.