ಶಾಸನಬದ್ಧ ಬೋನಸ್ 7 ಸಾವಿರಕ್ಕೆ ಸೀಮಿತ
Team Udayavani, Nov 12, 2019, 3:00 AM IST
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಶಾಸನಬದ್ಧ ಬೋನಸ್ ಅನ್ನು ಏಳು ಸಾವಿರ ರೂ.ಗಳಿಗೆ ಮಿತಿಗೊಳಿಸಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಬೋನಸ್ ಪಾವತಿ ಕಾಯ್ದೆ 1965 ಮತ್ತು ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆ ಸುಗ್ರೀವಾಜ್ಞೆ 2015ರ ಪ್ರಕಾರ ಬೋನಸ್ ಪಾವತಿಗೆ ಅರ್ಹತಾ ವೇತನ ಮೊತ್ತ (ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿ)ವನ್ನು 21 ಸಾವಿರ ರೂ. ಮೀರದ ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ಏಳು ಸಾವಿರ ರೂ. ಮಿತಿಗೊಳಿಸಲಾಗಿದೆ.
ಆದೇಶದಂತೆ 2017-18ನೇ ಸಾಲಿನ ಶಾಸನಬದ್ಧ ಬೋನಸ್ ಅನ್ನು 2019ರ ನ. 20ರಂದು ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪರೀಕ್ಷಾರ್ಥಿ ಉದ್ಯೋಗಿಗಳು ಸೇರಿ ದರ್ಜೆ 3/4 ಕಾಯಂ ಉದ್ಯೋಗಿಗಳು (ತರಬೇತಿ/ ಶಿಶಿಕ್ಷು ಹೊರತುಪಡಿಸಿ) ಗರಿಷ್ಠ ಪ್ರಮಾಣದ ಅಂದರೆ 7 ಸಾವಿರ ರೂ. ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ. 12 ತಿಂಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ಪ್ರಕರಣಗಳಲ್ಲಿ ಸೇವಾವಧಿವರೆಗೆ ಮಾತ್ರ ಬೋನಸ್ ಲೆಕ್ಕಾಚಾರ ಮಾಡಿ ನೀಡಬೇಕು. 30 ದಿನಗಳಿಗಿಂತ ಕಡಿಮೆ ಸೇವೆ ಇದ್ದವರಿಗೆ ಬೋನಸ್ ಇಲ್ಲ ಎಂದು ನಿಗಮದ ಪ್ರಕಟಣೆ ತಿಳಿಸಿದೆ.