ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ
Team Udayavani, Feb 27, 2021, 3:07 PM IST
ಹಿರಿಯೂರು: ನಗರದಲ್ಲಿ ದಕ್ಷಿಣ ಕಾಶಿಯೆಂದು ಪ್ರಖ್ಯಾತಿ ಪಡೆದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಜನ ಭಕ್ತ ಸಮೂಹದ ಮಧ್ಯೆ ಶ್ರದ್ಧಾ, ಭಕ್ತಿಯಿಂದ ಜರುಗಿತು.
ದೇವಾಲಯದಲ್ಲಿ ವಿಶೇಷವಾಗಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಆಚರಣೆಗಳು ನಡೆದವು. ದೇವಸ್ಥಾನದ ಹಿಂಭಾಗದಲ್ಲಿರುವ ಸುಮಾರು 35 ಅಡಿ ಉದ್ದದ ಎರಕದ ಶಿವ ಧನಸ್ಸನ್ನು ಯುವಕರು ಹರ ಹರ ಮಹಾದೇವ ಎಂದು ವೇದಾವತಿ ನದಿ ದಡದ ಬಳಿ ಕೊಂಡೊÂಯ್ದು ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರು ಹರ್ತಿಕೋಟೆ ಶ್ರೀ ವೀರಭದ್ರಶ್ವೇಶ್ವರ ಸ್ವಾಮಿಯನ್ನು ಜಾತ್ರಾ ಉತ್ಸವಕ್ಕೆ ಆಹ್ವಾನಿಸುವಂತಹ ಸಂಪ್ರದಾಯ ಆಚರಣೆ ನಡೆದು, ಮಧ್ಯಾಹ್ನ ನಂತರ ಶ್ರೀ ತೇರುಮಲ್ಲೇಶ್ವರ, ಉಮಾಮಹೇಶ್ವರ, ಚಂದ್ರಮೌಳೇಶ್ವರ ದೇವರ ಗರ್ಭ ಗುಡಿಯಿಂದ ವಿಶೇಷ ಅಲಂಕಾರದೊಂದಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ಬಗೆ ಬಗೆಯ ಹೂವಿನಿಂದ ಅಲಂಕಾರ ಮಾಡಿದ್ದ ರಥಗಳ ಮೇಲೆ ವಿಜೃಂಭಿಸಿದವು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಡಿ.ಟಿ. ಶ್ರೀನಿವಾಸ್, ತಹಶೀಲ್ದಾರ್ ಜ.ಎಚ್. ಸತ್ಯನಾರಾಯಣ, ಮಾಜಿ ಸಚಿವ ಡಿ. ಸುಧಾಕರ್, ಬೆಂಗಳೂರಿನ ಉದ್ಯಮಿ ಆಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು, ನಗರಸಭೆ ಅಧ್ಯಕ್ಷ ಶಂಶುನ್ನಿಸಾ, ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಪಂ ಸದಸ್ಯ ಆರ್.ನಾಗೇಂದ್ರ ನಾಯ್ಕ, ವಿಶೇಷ ಗಣ್ಯ ವ್ಯಕ್ತಿಗಳು, ದೇವಸ್ಥಾನ ದ ಅರ್ಚಕರು ಕೈವಾಡಸ್ಥರು ಇದ್ದರು. ದೇಸ್ಥಾನದ ಮುಂಭಾಗದಿಂದ ಸಿದ್ಧನಾಯಕ ವೃತ್ತದ ಅರಳಿ ಮರದವರೆಗೂ ರಥೋತ್ಸವ ಜರುಗಿತು. ಭಕ್ತರು ರಥಕ್ಕೆ ಬಾಳೆ ಹಣ್ಣು, ಹೂವು, ದವನ ಅರ್ಪಿಸಿ ಭಕ್ತಿ ಭಾವ ಮೆರೆದರು.
ಅನೇಕ ಸಂಘ ಸಂಸ್ಥೆಯವರು ತಂಪಾದ ಪಾನೀಯ, ಮಜ್ಜಿಗೆ, ಲಘು ಉಪಾಹಾರವನ್ನು ಭಕ್ತರಿಗೆ ನೀಡುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು. ಸಂಜೆ ಶ್ರೀ ಉಮಾಮಹೇಶ್ವರ, ಚಂದ್ರ ಮೌಳೇಶ್ವರ ರಥೋತ್ಸವ ಜರುಗಿತು. ಜಿಲ್ಲೆ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.