ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ
ಮುಸ್ಲಿಂರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ.
Team Udayavani, Mar 2, 2021, 6:35 PM IST
ರಾಯಚೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಸಮಾಜದ ನಾಯಕರನ್ನು ರಾಜಕೀಯವಾಗಿ ಬೆಳೆಯಲು ಬಿಡದೇ ತುಳಿಯುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ನಗರದ ಡಾ| ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಮುಸ್ಲಿಮರು ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸರು ತಡೆದರು.
ಇತ್ತೀಚೆಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ಚುಕ್ಕಾಣಿ ಹಿಡಿಯಲಾಗಿದೆ. ಬಿಜೆಪಿಯನ್ನು ಅಧಿ ಕಾರದಿಂದ ದೂರ ಮಾಡುವ ಉದ್ದೇಶದಿಂದ ಶಾಸಕ ತನ್ವೀರ್ ಸೇಠ್ ಮಾಡಿರುವ ಕೆಲಸಕ್ಕೆ ಬೆಂಬಲಿಸದೇ ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ರಿಗೆ ಸಿದ್ದರಾಮಯ್ಯನವರು ವಿನಾಕಾರಣ ತೊಂದರೆ ನೀಡುತ್ತಿರುವುದು ಖಂಡನೀಯ ಎಂದು ದೂರಿದರು.
ಮುಸ್ಲಿಂರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ.
ಸಿದ್ದರಾಮಯ್ಯ ಮುಸ್ಲಿಂ ಏಳ್ಗೆ ಬಯಸದೇ ತನ್ನ ಪ್ರಾಬಲ್ಯ ಮೆರೆಯಲು ಪಕ್ಷಕ್ಕಾಗಿ ಶ್ರಮಿಸಿದ ನಾಯಕರನ್ನೇ ಮೂಲೆಗುಂಪು ಮಾಡಲು ಹೊರಟಿದ್ದಾರೆ. ಕಳೆದ
ಹಲವು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಮುಸ್ಲಿಂ ನಾಯಕರನ್ನು ಮುಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಸಿದ್ದು, ಕೂಡಲೇ ಅಖೀಲ ಭಾರತ ಕಾಂಗ್ರೆಸ್ ಸಮಿತಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತಕ್ಷಣ ಮಧ್ಯೆ ಪ್ರವೇಶಿಸಿ ಈ ಅನ್ಯಾಯ ತಡೆಯುವಂತೆ ಒತ್ತಾಯಿಸಿದರು.
ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಕೊಡುಗೆ ಸಾಕಷ್ಟಿದೆ. ಸಾಕಷ್ಟು ಮುಸ್ಲಿಂ ನಾಯಕರು ಪಕ್ಷಕ್ಕಾಗಿ ಅವಿತರವಾಗಿ ಶ್ರಮಿಸಿದ್ದಾರೆ. ಆದರೆ, ಈಗ ಮುಸ್ಲಿಂ ನಾಯಕರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಈ ವೇಳೆ ಮುಸ್ಲಿಂ ಸಮಾಜದ ಸಜ್ಜದ್ ಖಾಜಿ, ಜಾವೇದ್ ಶೇಖ್, ಸೈಯ್ಯದ್ ಸಾದಿಕ್, ಆದೀಲ್ ಶೇಖ್, ಸೈಯದ್ ಸುಲ್ತಾನ್, ಅಜ್ಜು ಸೌದಾಗರ್, ಮಹೆಬೂಬ್ ಬೇಗ್ ಇತರರಿದ್ದರು.