ಸಿಎಂ ಅವರನ್ನು ಭೇಟಿ ಮಾಡಿದ ಮಾದಿಗ ಸಮುದಾಯದ ಮುಖಂಡರು
Team Udayavani, Mar 25, 2021, 6:13 PM IST
ಬೆಂಗಳೂರು : ಇಂದು ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಸಿಎಂರನ್ನು ಭೇಟಿ ಮಾಡಿ ಒಳಮೀಸಲಾತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾದಿಗ ಸಮುದಾಯದ ಮಠಾಧೀಶರು, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಂಸದ ಎ. ನಾರಾಯಣಸ್ವಾಮಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಹೋರಾಟಗಾರರು ಸಿಎಂ ಸಿವಾಸದಲ್ಲಿ ಭೇಟಿ ಮಾಡಿ ಒಳಮೀಸಲಾತಿ, ಸದಾಶಿವ ಆಯೋಗದ ವರದಿ ಹಾಗೂ ಮಾದಿಗ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಸುಧೀರ್ಘ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಮಾದಿಗ ಸಮುದಾಯದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಾಳಜಿ ಇದೆ, ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯ ಸಮ್ಮತ ನಿರ್ಣಯ ಕೈಗೊಂಡು ಈ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇನೆ, ನನ್ನ ಮೇಲೆ ವಿಶ್ವಾಸವಿಡಿ ಎಂದಿದ್ದಾರೆ.
ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ತಲಾ 150 ಕೋಟಿ ರೂಗಳಂತೆ ಒಟ್ಟು 300 ಕೋಟಿ ಅನುದಾನವನ್ನು ಹೆಚ್ಚುವಾರಿಯಾಗಿ ಬಿಡುಗಡೆ ಮಾಡುವುದಾಗಿ ಬಿಎಸ್ ವೈ ತಿಳಿಸಿದರು.