ಸಂಘದ ಸಮಾಜಪರ ಯೋಜನೆಗಳಿಗೆ ಎಲ್ಲರ ಸಹಕಾರ ಸದಾ ಇರಲಿ: ಚಂದ್ರಹಾಸ ಶೆಟ್ಟಿ
Team Udayavani, Apr 13, 2021, 11:17 AM IST
ಕಲ್ಯಾಣ್: ಬಂಟರ ಸಂಘ 94 ವರ್ಷಗಳ ಇತಿಹಾಸ ಹೊಂದಿದ್ದು, ನಮ್ಮ ಹಿರಿಯ ಅಧ್ಯಕ್ಷರ ಮುತುವರ್ಜಿ, ಸಮಾಜ ಬಾಂಧವರ ಮೇಲಿನ ಪ್ರೀತಿಯಿಂದ ಸಂಘದ ಕೀರ್ತಿಯು ವಿಶ್ವದಲ್ಲಿ ಪಸರಿದೆ. ಸಂಘದ ವಿವಿಧ ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸಮಾಜದ ವಿದ್ಯಾರ್ಥಿಗಳಿಗೆ ಸುಮಾರು 2 ಕೋಟಿ ರೂ. ಗಳ ಮೊತ್ತದ ಸವಲತ್ತುಗಳನ್ನು ನೀಡುತ್ತಿದ್ದೇವೆ. ಅದರೊಂದಿಗೆ ಪ್ರತೀವರ್ಷ ಸುಮಾರು 6 ಕೋ. ರೂ. ಗಳನ್ನು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಸಹಾಯವನ್ನು ನೀಡುತ್ತಿದ್ದೇವೆ. ಸಂಘ ಸಂಚಾಲಿತ ಮಾತೃ ಭೂಮಿ ಕ್ರೆಡಿಟ್ ಸೊಸೈಟಿಯ ಅರ್ಥಿಕ ಸಹಾಯದಲಾಭವನ್ನು ಸಮಾಜ ಬಾಂಧವರು ಪಡೆಯಬೇಕು. ಎರಡು ವರ್ಷಗಳ ಅವಧಿಯಲ್ಲಿ ಬೊರಿವಲಿಯಲ್ಲಿ ನೂತನ ಶಿಕ್ಷಣ ಸಂಸ್ಥೆ ಪ್ರಾರಂಭವಾಗಲಿದೆ. ಈ ಸಂಸ್ಥೆಗೆ ತಮ್ಮೆಲ್ಲರ ಸಹಕಾರದ ರಕ್ಷೆ ಇರಲಿ. ಸಂಘವು ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿದ್ದು, ಇದರ ಲಾಭವನ್ನು ಸಮಾಜದ ಪ್ರತಿಯೋರ್ವರು ಪಡೆಯಬೇಕು ಎಂದು ಬಂಟರ ಸಂಘದ ನೂತನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.
ಇತ್ತೀಚೆಗೆ ಅಂಬರ್ನಾಥ್ ಚಿಕ್ಕೋಳಿಯ ಎಸ್- 3 ಹೊಟೇಲ್ನ ಸಭಾಂಗಣದಲ್ಲಿ ನಡೆದ ಬಂಟರ ಸಂಘ ಇದರ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಪ್ರಾದೇಶಿಕ ಸಮಿತಿಯ ಸಮನ್ವಯಕ ಸುಬ್ಬಯ್ಯ ಶೆಟ್ಟಿ ಮಾತನಾಡಿ, ಭಿವಂಡಿ-ಬದ್ಲಾಪುರ ಪ್ರದೇಶದ ಸಮಾಜ ಬಾಂಧವರನ್ನು ಒಗ್ಗೂಡಿಸುವ ಕಾರ್ಯ ಸತತವಾಗಿ ಈ ಪ್ರಾದೇಶಿಕ ಸಮಿತಿಯಿಂದ ನಡೆಯುತ್ತಿದೆ. ನಿಮ್ಮೆಲ್ಲರ ಪ್ರೀತಿ, ನಾನು ಮಾಡಿದ ಉತ್ತಮ ಕಾರ್ಯಗಳನ್ನು ಗುರುತಿಸಿ ನನ್ನನ್ನು ಪೂರ್ವ ವಲಯದ ಸಮನ್ವಯಕರಾಗಿ ನಿಯುಕ್ತಿಗೊಳಿಸಿದ್ದಾರೆ. ನನ್ನಿಂದಾದ ಸಮಾಜದ ಪ್ರತಿಯೊಂದು ಕೆಲಸಗಳನ್ನು ಶ್ರದ್ಧಾಪೂರ್ವಕವಾಗಿ ಮಾಡಲು ತಯಾರಿದ್ದೇನೆ. ನಮ್ಮ ಅಧ್ಯಕ್ಷರ ಯೋಜನೆ, ಯೋಚನೆಗಳಿಗೆ ಪ್ರಾದೇಶಿಕ ಸಮಿತಿಯ ಸಹಕಾರ ನೀಡಲು ಬದ್ದನಾಗಿದ್ದೇನೆ ಎಂದು ತಿಳಿಸಿದರು.
ಯುವ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷ ಸುಮಿತ್ ಶೆಟ್ಟಿ ಮಾತನಾಡಿ, ಯುವ ವಿಭಾಗವು ಪ್ರತಿಯೊಬ್ಬರ ಸಹಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದೆ. ನನ್ನ ಸಮಾಜಮುಖೀ ಕಾರ್ಯಗಳಿಗೆ ಮಾತಾಪಿತರ ಹಾಗೂ ಸಹೋದರನ ಸಹಕಾರ, ಅದರೊಂದಿಗೆ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿಯವರ ಮಾರ್ಗದರ್ಶನ ಬಹಳಷ್ಟು ದೊರಕಿದೆ. ನಾವೆಲ್ಲರೂ ಸಮಾಜದ ಕಾರ್ಯಗಳನ್ನು ನಮ್ಮ ಮನೆಯ ಕಾರ್ಯವೆಂದು ಭಾವಿಸೋಣ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನೂತನ ಕಾರ್ಯಾಧ್ಯಕ್ಷ ರವೀಂದ್ರ ವೈ. ಶೆಟ್ಟಿ, ಸುಜಾತಾ ಆರ್. ಶೆಟ್ಟಿ ದಂಪತಿ, ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಪ್ರವೀಣಾ ಪ್ರಕಾಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ದಂಪತಿ, ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ, ಪ್ರತೀಕ್ಷಾ ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಲಾಯಿತು.
ನಿರ್ಗಮನ ಕಾರ್ಯಾಧ್ಯಕ್ಷ ಸತೀಶ್ ಎನ್. ಶೆಟ್ಟಿ, ಸವಿತಾ ಶೆಟ್ಟಿ ದಂಪತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಮಿತ್ ಅವರ ಮಾತಾಪಿತರಾದ ಮಹಾಬಲ ಶೆಟ್ಟಿ ದಂಪತಿ, ಪ್ರಾದೇಶಿಕ ಸಮಿತಿಗೆ ಹೆಚ್ಚಿನ ಸಹಕಾರ ನೀಡಿದ ದಿವಾಕರ ಶೆಟ್ಟಿ ಇಂದ್ರಾಳಿ, ನಿಕಟಪೂರ್ವ ಸಂಚಾಲಕ ಸುಬ್ಬಯ್ಯ ಶೆಟ್ಟಿ, ಪ್ರಾದೇಶಿಕ ಸಮಿತಿಯ ಪ್ರಥಮ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಮಮತಾ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಪ್ರಾರ್ಥನೆ ಗೈದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಇಂದ್ರಾಳಿ, ಸಮನ್ವಯಕ ಸುಬ್ಬಯ್ಯ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಶೆಟ್ಟಿ, ಸತೀಶ್ ಎನ್. ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಭಾಸ್ಕರ್ ಟಿ. ಶೆಟ್ಟಿ ಭಿವಂಡಿ, ಸುಬೋಧ್ ಭಂಡಾರಿ, ಹರೀಶ್ ಟಿ. ಶೆಟ್ಟಿ, ಸಂತೋಷ್ ಎಚ್. ಶೆಟ್ಟಿ, ಪ್ರಕಾಶ್ ಆರ್. ಶೆಟ್ಟಿ, ಮಂಜುನಾಥ ಶೆಟ್ಟಿ, ಸಮಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ :
ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ನಾಗಕಿರಣ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ಭಜನೆ, ಹಾಗೂ ಯುವ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕಳೆದ ಹನ್ನೆರಡು ವರ್ಷಗಳಿಂದ ಪ್ರಾದೇಶಿಕ ಸಮಿತಿಯಲ್ಲಿ ನನ್ನ ಕೈಲಾದಷ್ಟು ಸೇವೆ ಮಾಡಿ ನಿಮ್ಮೆಲ್ಲರ ಆಶೀರ್ವಾದದಿಂದ ಪ್ರಾದೇಶಿಕ ಸಮಿತಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ¨ªೇನೆ. ಸಮಾಜದ ಕೆಲಸಗಳನ್ನು ಮಾಡುವಾಗ ಕೆಲಸವೆಂದು ತಿಳಿಯದೆ ಸೇವಾ ಭಾವನೆಯಿಂದ ಮಾಡಿದ್ದೇನೆ. ಆದ್ದರಿಂದ ನಾನು ಮಾಡಿದ ಸೇವೆಯಿಂದ ನನಗೆ ಸಂತೃಪ್ತಿ ಸಿಕ್ಕಿದೆ.-ಸತೀಶ್ ಎನ್. ಶೆಟ್ಟಿ ನಿರ್ಗಮನ ಕಾರ್ಯಾಧ್ಯಕ್ಷರು, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ.
ಪ್ರಾದೇಶಿಕ ಸಮಿತಿಯ ಪ್ರಾರಂಭದಿಂದಲೂ ಕೋಶಾಧಿಕಾರಿಯಾಗಿ, ಕಾರ್ಯದರ್ಶಿಯಾಗಿ, ಉಪಕಾರ್ಯಾಧ್ಯಕ್ಷನಾಗಿ ಇಂದು ಸತೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದೇನೆ. ಅಧ್ಯಕ್ಷರ ಎಲ್ಲ ಯೋಜನೆಗಳಿಗೆ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ವತಿಯಿಂದ ಎಲ್ಲ ಸಹಕಾರವನ್ನು ನೀಡುತ್ತೇನೆ ಎಂಬ ಭರವಸೆ ನೀಡುತ್ತಿದ್ದೇನೆ.-ರವೀಂದ್ರ ವೈ. ಶೆಟ್ಟಿ, ನೂತನ ಕಾರ್ಯಾಧ್ಯಕ್ಷರು, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ
ಬಂಟ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಪ್ರಾದೇಶಿಕ ಸಮಿತಿಯ ನೂತನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ನನಗೆ ಸಮಾಜ ಏನು ಕೊಟ್ಟಿದೆ ಎನ್ನವುದಕ್ಕಿಂತ ನಾನು ಏನನ್ನು ಕೊಡಬಲ್ಲೆಎನ್ನುವ ಧ್ಯೇಯದೊಂದಿಗೆ ಸಂಘದ ಪ್ರತಿಯೊಂದು ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಲಿದ್ದೇನೆ. ಸಂಘದ ಮಹಿಳಾ ವಿಭಾಗದ ಉಮಾ ಕೃಷ್ಣ ಶೆಟ್ಟಿಯವರ ಮಹಿಳಾ ತಂಡಕ್ಕೆ ಸಂಪೂರ್ಣ ಸಹಕಾರವಿದೆ.-ಪ್ರವೀಣಾ ಪ್ರಕಾಶ್ ಶೆಟ್ಟಿ, ನೂತನ ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ
ಚಿತ್ರಾ ಆರ್. ಶೆಟ್ಟಿ ಮತ್ತು ನೀಲೇಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಸಮಿತಿಗೆ ಸೇರ್ಪಡೆ ಗೊಂಡಿದ್ದೇನೆ. ರವೀಂದ್ರ ಶೆಟ್ಟಿಯವರು ನನಗೆ ಯುವ ವಿಭಾಗದ ಹೊಸ ಜವಾಬ್ದಾರಿ ನೀಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಯುವ ವಿಭಾಗದ ಎಲ್ಲ ಸದಸ್ಯರನ್ನು ಹುರಿದುಂಬಿಸಿ ಸಂಘದ ಯೋಜನೆಗಳಿಗೆ ಶಕ್ತಿ ಮೀರಿ ಸಹಕಾರ ನೀಡುತ್ತೇನೆ. -ಮಂಜುನಾಥ ಶೆಟ್ಟಿ, ನೂತನ ಕಾರ್ಯಾಧ್ಯಕ್ಷ, ಯುವ ವಿಭಾಗ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ.