ತೆಲಂಗಾಣ: ರಾಜ್ಯದ ಎಲ್ಲಾ ಅರ್ಹ ಜನರಿಗೂ ಉಚಿತ ಕೋವಿಡ್ ಲಸಿಕೆ: ಸಿಎಂ ರಾವ್
ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಕೆಯಾದ ನಂತರ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ
Team Udayavani, Apr 24, 2021, 7:31 PM IST
ಹೈದರಾಬಾದ್: ರಾಜ್ಯದಲ್ಲಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೋವಿಡ್ 19 ಲಸಿಕೆಯನ್ನು ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶನಿವಾರ(ಏಪ್ರಿಲ್ 24) ಘೋಷಿಸಿದ್ದಾರೆ.
ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಅಂದಾಜು 2,500 ಕೋಟಿ ರೂಪಾಯಿ ವ್ಯಯವಾಗಲಿದೆ. ಆದರೆ ಆರೋಗ್ಯದ ವಿಚಾರ ಬಂದಾಗ ಹಣ ಇಲ್ಲಿ ಮುಖ್ಯವಾಗುವುದಿಲ್ಲ ಎಂದು ಸಿಎಂ ರಾವ್ ತಿಳಿಸಿರುವುದಾಗಿ ವರದಿ ಹೇಳಿದೆ.ವಿವಿಧ ರಾಜ್ಯಗಳಿಂದ ಆಗಮಿಸಿರುವ ಜನರು ಸೇರಿದಂತೆ ತೆಲಂಗಾಣದ ಜನಸಂಖ್ಯೆ ಸುಮಾರು 4 ಕೋಟಿಯಷ್ಟು ಇದೆ. ಈಗಾಗಲೇ 35 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನುಳಿದ ಎಲ್ಲಾ ಅರ್ಹರಿಗೂ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದು, ಅವರು ಕೂಡಾ ಕೆಲವು ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಕೆಯಾದ ನಂತರ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ಕೋವಿಡ್ ಸೋಂಕಿನ ವಿಚಾರದಲ್ಲಿ ಲಸಿಕೆ ನೀಡಿಕೆಯಲ್ಲಾಗಲಿ, ಆಕ್ಸಿಜನ್ ಕೊರತೆಯಾಗಲಿ, ಕೋವಿಡ್ ಗೆ ಸಂಬಂಧಿಸಿದ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.