ಅಂಜನಾದ್ರಿಯಲ್ಲಿ ಸರಳ ಹನುಮ ಜಯಂತಿ
ಅರ್ಚಕ ಮಹಾಂತ ವಿದ್ಯಾದಾಸಬಾಬಾ ನೇತೃತ್ವದಲ್ಲಿ ಪೂಜೆ! ತಮ್ಮೂರಲ್ಲೇ ಹನುಮಮಾಲೆ ವಿಸರ್ಜನೆ ಮಾಡಿದ ಭಕ್ತರು
Team Udayavani, Apr 28, 2021, 4:55 PM IST
ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಹನುಮಜಯಂತಿಯನ್ನು ಈ ಬಾರಿಯೂ ಸರಳವಾಗಿ ಆಚರಿಸಲಾಯಿತು.
ಕೊರೊನಾ 2ನೇ ಅಲೆ ಹಿಲ್ಲೆಯಲ್ಲಿ ಅಂಜನಾದ್ರಿಯಲ್ಲಿ ಈ ವರ್ಷವೂ ಹನುಮ ಮಾಲಾವಿಸರ್ಜನೆಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಅಂಜನಾದ್ರಿ ಬೆಟ್ಟ ಹತ್ತಲು ಹನುಮಮಾಲಾಧಾರಿ ಸೇರಿ ಯಾರೊಬ್ಬರಿಗೂ ಗ್ರಾಮೀಣ ಪೊಲೀಸರು ಅವಕಾಶ ನೀಡಲಿಲ್ಲ. ದೇಗುಲಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧವಿದ್ದ ಪರಿಣಾಮ ಅಂಜನಾದ್ರಿ ಪ್ರವೇಶ ಮಾಡದಂತೆ ಎಲ್ಲ ಮಾರ್ಗಗಳಿಗೂ ಪೊಲೀಸ್ ಕಾವಲು ಹಾಕಲಾಗಿತ್ತು.
ತಹಶೀಲ್ದಾರ್ ಅವಕಾಶ ನೀಡಿದ ಕೆಲವರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿತ್ತು. ಧಾರವಾಡ ಹೈಕೋರ್ಟ್ ಸೂಚನೆಯಂತೆ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಹನುಮಜಯಂತಿ ನಿಮಿತ್ತ ದೇಗುಲದಲ್ಲಿ ಕೊರೊನಾ ಮಾರ್ಗಸೂಚಿಯಂತೆ ಪೂಜೆ, ಹೋಮ-ಹವನ ಜರುಗಿದವು. ತಾಲೂಕಿನ ಸಾಣಾಪುರ ಗ್ರಾಮದ ಬೆಟ್ಟದ ಮೇಲಿರುವ ಬಾಲಾಂಜನೇಯ ಸ್ವಾಮಿ ದೇಗುಲದಲ್ಲಿ ಸುತ್ತಲಿನ ಗ್ರಾಮಗಳ ಹನುಮಮಾಲಾಧಾರಿಗಳು ಬೆಳಗಿನ ಜಾವ ಮಾಲೆ ವಿಸರ್ಜನೆ ಮಾಡಿದರು. ನಗರದ ಕೋಟೆ ಆಂಜನೇಯ ಗುಡಿ ಜಯನಗರದ ಸತ್ಯಾತ್ಮ ಆಂಜನೇಯ, ಲಕ್ಷ್ಮಿ ಕ್ಯಾಂಪಿನ ಮಾರುತೇಶ್ವರ ಗುಡಿ ಹಿರೇಜಂತಗಲ್ ಹನುಮಂತದೇವರ ಗುಡಿಯಲ್ಲಿ ಸರಳವಾಗಿ ಹನುಮಜಯಂತಿ ಆಚರಿಸಲಾಯಿತು.