ಸಿಎಂ ಬರುವ ಮುನ್ನವೇ ಬಿಮ್ಸನಲ್ಲಿ ಮೈನರ್ ಸರ್ಜರಿ
Team Udayavani, Jun 1, 2021, 8:06 PM IST
ಬೆಳಗಾವಿ: ಇಲ್ಲಿನ ಬಿಮ್ಸ್ನ ಅವ್ಯವಸ್ಥೆ ಹಾಗೂ ಕೋವಿಡ್ ವಾರ್ಡ್ ನಲ್ಲಿಯೇ ಶವ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಶುಶ್ರೂಷಕರು, ನರ್ಸಿಂಗ್ ಮುಖ್ಯಸ್ಥರು ಮತ್ತು ಒಬ್ಬ ವೈದ್ಯರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೋವಿಡ್ ವಾರ್ಡ್ಗೆ ಶನಿವಾರ ಭೇಟಿ ನೀಡಿದ್ದ ವೇಳೆ, ಶವವನ್ನು ಸಾಗಿಸದೇ ಕೋವಿಡ್ ವಾರ್ಡ್ ನಲ್ಲಿಯೇ ಇಟ್ಟಿದ್ದು ಗಮನಿಸಿ ಬಿಮ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಜಿಲ್ಲಾಸ್ಪತ್ರೆ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಜೂನ್ 4ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಹಲವು ಬೆಳವಣಿಗೆಗಳು ನಡೆದಿವೆ. ಒಬ್ಬ ನರ್ಸಿಂಗ್ ಮುಖ್ಯಸ್ಥರನ್ನು ಹಾಗೂ ಆರು ಶುಶ್ರೂಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಹುಸೇನಸಾಬ ಖಾಜಿ ಆದೇಶ ಹೊರಡಿಸಿದ್ದಾರೆ. ಜತೆಗೆ ಕರ್ತವ್ಯ ಚ್ಯುತಿ ಎಸಗಿದ ಆರೋಪದ ಮೇಲೆ ವೈದ್ಯರೊಬ್ಬರನ್ನೂ ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಖಾಜಿ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಡಾ|ಸುಧಾಕರ ಅವರಿಗೆ ತಾತ್ಕಾಲಿಕವಾಗಿ ಅ ಧಿಕಾರ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.