ಬಡವರಿಗೆ “ನೆರವು’ ಯೋಜನೆ, ಸೋಂಕಿತರಿಗೆ ಆ್ಯಂಬುಲೆನ್ಸ್
Team Udayavani, Jun 8, 2021, 10:35 AM IST
ಬೆಂಗಳೂರು: “ಕೋವಿಡ್ ಎರಡನೇ ಅಲೆ ಪ್ರಾರಂಭವಾದ ತಕ್ಷಣ ಪ್ರತಿ ವಾರ್ಡ್ನಲ್ಲೂ ಎರಡು ಬಾರಿ ಸ್ಯಾನಿಟೈಜೇಷನ್ ಮಾಡಿ ಸೋಂಕಿತರ ಸೇವೆಗೆ ಎರಡು ಆ್ಯಂಬುಲೆನ್ಸ್ ಒದಗಿಸಿ 1000 ಸ್ವಯಂ ಸೇವಕರ ತಂಡದೊಂದಿಗೆ ಕೆಲಸ ಮಾಡಲಾಗುತ್ತಿದೆ’ ಹೆಬ್ಬಾಳದ ಶಾಸಕ ಬೈರತಿ ಸುರೇಶ್ ಅವರ ಮಾತುಗಳಿವು. “ಉದಯವಾಣಿ’ ಜತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ , ಲಸಿಕೆ ಅಭಿಯಾನ, ಬಡ ವರ್ಗಕ್ಕೆ ನೆರವು ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ನಿಮ್ಮ ಕ್ಷೇತ್ರದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ?
ಕೋವಿಡ್ 2ನೇ ಅಲೆ ಪ್ರಾರಂಭವಾದ ತಕ್ಷಣ ಕ್ಷೇತ್ರದ ಪ್ರತಿ ವಾರ್ಡ್ನಲ್ಲೂ ವೈಯಕ್ತಿಕ ವೆಚ್ಚದಲ್ಲಿ ಎರಡು ಬಾರಿ ಸ್ಯಾನಿಟೈಜೇಷನ್ ಮಾಡಿಸಲಾಗಿದೆ. ಎರಡು ಆ್ಯಂಬುಲೆನ್ಸ್ ವಾಹನದ ಸೇವೆ ಒದಗಿಸಲಾಗಿದೆ.
ಸೋಂಕಿತರ ಚಿಕಿತ್ಸೆಗಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ?
ರಾಜೀವ್ಗಾಂಧಿ ದಂತ ವೈದ್ಯಕೀಯ ಕಾಲೇಜಿನಲ್ಲಿ 100 ಹಾಸಿಗೆ ಆಸ್ಪತ್ರೆ ಸ್ಥಾಪಿಸಲಾಗಿದೆ. 35 ಆಕ್ಸಿಜನ್, ಐಸಿಯು 10 ಹಾಸಿಗೆ ಇದೆ. ತಿಂಗಳಿಗೆ 1 ಕೋಟಿ ರೂ. ವೆಚ್ಚ ಬರಲಿದ್ದು ಬಿಬಿಎಂಪಿ 30 ಲಕ್ಷ ರೂ. ನೀಡುತ್ತಿದೆ. ನಾನು ಮತ್ತು ಸ್ನೇಹಿತರು ವೈಯಕ್ತಿಕವಾಗಿ 70 ಲಕ್ಷ ರೂ. ವೆಚ್ಚ ಭರಿಸುತ್ತೇವೆ. ಅಲ್ಲಿ ಉಚಿತವಾಗಿ ಊಟ, ತಿಂಡಿ ನೀಡಲಾಗುತ್ತಿದೆ. ಅಲ್ಲಿ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ 25 ಹಾಸಿಗೆ ಇರುವ ವಿಶೇಷ ಆರೈಕೆ ಕೇಂದ್ರ ಮಾಡಲಾಗಿದೆ. ಕೊರೊನಾ ಪ್ರಾರಂಭವಾದ ಒಂದೇ ವಾರದಲ್ಲಿ ಹೆಬ್ಟಾಳ ಪಶು ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಕೇರ್ ಕೇಂದ್ರ ಆರಂಭಿಸಲಾಯಿತು. ಇದು ರಾಜ್ಯದ ಮೊದಲ ಕೇಂದ್ರವೂ ಹೌದು.
ಬಡ ಕುಟುಂಬಗಳಿಗೆ ಯಾವ ರೀತಿ ನೆರವು ನೀಡಲಾಗುತ್ತಿದೆ?
30 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ನೀಡಲಾಗಿದೆ. ನಿತ್ಯ ಒಂದು ತಿಂಗಳಿನಿಂದ 8 ಸಾವಿರ ಜನರಿಗೆ ಆಹಾರ ಪೊಟ್ಟಣ ನೀಡಲಾಗುತ್ತಿದೆ. ಇಸ್ಕಾನ್ ಅಕ್ಷಯ ಪಾತ್ರದಿಂದ 3 ಸಾವಿರ ಆಹಾರ ಪ್ಯಾಕೆಟ್ ನೆರವು ಕೊಟ್ಟಿದ್ದಾರೆ. ವೈಯಕ್ತಿಕ ವೆಚ್ಚದಲ್ಲಿ ಐದು ಸಾವಿರ ಆಹಾರ ಪ್ಯಾಕೆಟ್ ನೀಡುತ್ತಿದ್ದೇನೆ. ಜತೆಗೆ, “ಕಾಂಗ್ರೆಸ್ ನೆರವು’ ಯೋಜನೆ ರೂಪಿಸಿ ಸೋಂಕಿತರಿಗೆ ಉಚಿತ ಆಹಾರ ಧಾನ್ಯ, ಮೆಡಿಕಲ್ ಕಿಟ್ ನೀಡುತ್ತಿದ್ದೇವೆ.
ಲಸಿಕೆ ಅಭಿಯಾನ ಹೇಗಿದೆ?
ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗಿದೆ. ದಾಸ್ತಾನು ಕೊರತೆ ಇದೆ. ದಿನಕ್ಕೆ 200 ರಿಂದ 300 ಬರುತ್ತಿದೆ. 18 ರಿಂದ 44 ವರ್ಷದವರಿಗೆ ಆದ್ಯತೆ ಮೇಲೆ ಕೊಡಿಸಲಾಗುತ್ತಿದೆ. ಕ್ಷೇತ್ರದಲ್ಲಿ ಇದುವರೆಗೂ 8 ಸಾವಿರ ಜನರಿಗೆ ಲಸಿಕೆ ಕೊಡಿಸಲಾಗಿದೆ.
ಕ್ಷೇತ್ರದ ಜನತೆಗೆ ನೆರವು ಒದಗಿಸಲು ಸ್ವಯಂ ಸೇವಕರು ತಂಡ ಇದೆಯೇ?
250 ಜನ ಮುಂಚೂಣಿ ಸ್ವಯಂ ಸೇವಕರು ಇದ್ದು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರ ಜತೆಗೆ ಮನೆ ಮನೆಗೆ ಹೋಗಿ ತಪಾಸಣೆ ಮಾಡಿಸುವುದು ಲಸಿಕೆ ಹಾಕಿಸುವುದು ಮಾಡುತ್ತಿದ್ದಾರೆ. 750 ಜನ ಎರಡನೇ ಹಂತದ ಸ್ವಯಂ ಸೇವಕರಿದ್ದು ನಿತ್ಯ ಅಡುಗೆ ಮಾಡಿಸುವುದು, ಆಹಾರ ಪೊಟ್ಟಣ ಪ್ಯಾಕ್ ಮಾಡುವುದು ನಡೆಯುತ್ತಿದೆ.
ಹೆಬ್ಬಾಳ ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ದಂತ ವೈದ್ಯಕೀಯ ಕಾಲೇಜಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಿ ನಾನು ನನ್ನ ಸ್ನೇಹಿತರು ತಿಂಗಳಿಗೆ ವೈಯಕ್ತಿಕವಾಗಿ 70 ಲಕ್ಷ ವೆಚ್ಚ ಭರಿಸುತ್ತಿದ್ದೇವೆ. 30 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಒದಗಿಸಲಾಗಿದೆ. ಸರ್ಕಾರವೂ ಆಹಾರ ಧಾನ್ಯ ಕಿಟ್ ನೀಡಿದರೆ ಮತ್ತಷ್ಟು ಒಳ್ಳೆಯದಾಗುತ್ತದೆ. ●ಬೈರತಿ ಸುರೇಶ್
-ಎಸ್. ಲಕ್ಷ್ಮಿನಾರಾಯಣ