ಕಾರ್ಮಿಕರ ಕಾರ್ಡ್ ಕೊಡದವನಿಗೆ “ಧರ್ಮದೇಟು’
Team Udayavani, Jul 11, 2021, 10:16 PM IST
ಗದಗ: ಮಹಿಳೆಯರಿಗೆ ಕಾರ್ಮಿಕ ಕಾರ್ಡ್ ಮಾಡಿಸಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಚೇತನಾ ಕ್ಯಾಂಟೀನ್ ಸಮೀಪದಲ್ಲಿ “ಸ್ವರದಾ’ ಎಂಬ ಸಂಸ್ಥೆಯ ಕಚೇರಿ ಹೊಂದಿದ್ದ ಸಂಸ್ಥೆಯ ನಿರ್ದೇಶಕ ಚಿತ್ರದುರ್ಗ ಮೂಲದ ಎನ್. ಕುಮಾರ್ಗೆ ಬಿಸಿ ಬಿಸಿ ಕಜ್ಜಾಯ ಬಿದ್ದಿವೆ. ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ಕಚೇರಿ ಸ್ಥಾಪಿಸಿರುವ ಎನ್.ಕುಮಾರ್ ಅವರು, ಕಾರ್ಮಿಕ ಇಲಾಖೆಯ ಕಾರ್ಡ್ ಮಾಡಿಸಿಕೊಡುವುದಾಗಿ ನಂಬಿಸಿದ್ದ. ಅವರ ಮಾತುಗಳನ್ನು ನಂಬಿದ್ದ ಜಿಲ್ಲೆಯ ಗದಗ, ಗಜೇಂದ್ರಗಡ, ರೋಣ, ಶಿರಹಟ್ಟಿ, ಮುಂಡರಗಿ ತಾಲೂಕಿನ ಸಾವಿರಾರು ಜನ ಮಹಿಳೆಯರು ಹಣ ಕಟ್ಟಿದ್ದರು. ಕಾರ್ಮಿಕ ಕಾರ್ಡ್ ಬಗ್ಗೆ ವಿಚಾರಿಸಿದರೆ ಕಾರ್ಡ್ಗಳು ಆಗ ಬರುತ್ತವೆ, ಈಗ ಬರುತ್ತವೆ ಎಂಬ ನೆಪ ಹೇಳುತ್ತಿದ್ದ. ಅಲ್ಲದೇ ಈಗ ವರ್ಷ ಕಳೆದಿದ್ದರಿಂದ ಮತ್ತೆ ಸಂಘದ ಸದಸ್ಯತ್ವ ನವೀಕರಿಸಬೇಕು. ಆ ನಂತರವೇ ಕಾರ್ಮಿಕ ಕಾರ್ಡ್ಗಳು ಬರುತ್ತವೆ ಎಂಬ ಷರತ್ತು ವಿ ಧಿಸಿದ್ದ ಎಂದು ಆರೋಪಿಸಲಾಗಿದೆ.
ಎನ್.ಕುಮಾರ್ ಅವರ ಕುಂಟು ನೆಪಗಳಿಂದ ಬೇಸತ್ತಿದ್ದ ಮಹಿಳೆಯರು ಶನಿವಾರ ತಮ್ಮ ಸಹೋದರ, ಪತಿ ಹಾಗೂ ಸಂಬಂಧಿ ಕರೊಂದಿಗೆ ಬಂದು ತದಾಗೆ ತೆಗೆದಿದ್ದಾರೆ. ಕಾರ್ಮಿಕ ಕಾರ್ಡ್ ನೀಡಬೇಕು ಇಲ್ಲವೇ ತಮ್ಮ ಹಣ ಹಿಂದಿರುಗಿಸಬೇಕೆಂದು ಪಟ್ಟು ಹಿಡಿದ್ದಾರೆ. ಈ ವೇಳೆ ಮಹಿಳೆಯರು ಹಾಗೂ ಎನ್. ಕುಮಾರ್ ಮಧ್ಯೆ ಮಾತಿಗೆ ಮಾತು ಬೆಳೆದಿದ್ದರಿಂದ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ತಿಂಗಳ ಗಡುವು: ಈ ಕುರಿತು ಮಾಹಿತಿ ತಿಳಿದ ಬೆಟಗೇರಿ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬಡಾವಣೆ ಠಾಣೆಗೆ ಕರೆದೊಯ್ದರು. ಬಳಿಕ ಠಾಣೆಯಲ್ಲಿ ನಡೆದ ಸಮಾಲೋಚನೆಯಲ್ಲಿ ಒಂದು ತಿಂಗಳಲ್ಲಿ ಮಹಿಳೆಯರಿಗೆ ಕಾರ್ಡ್ ಕೊಡಿಸುವುದಾಗಿ ಸಂಸ್ಥೆಯ ನಿರ್ದೇಶಕ ಎನ್.ಕುಮಾರ್ ಸಮಯಾವಕಾಶ ಪಡೆದರು. ಅದಕ್ಕೆ ಮಹಿಳೆಯರು ಒಪ್ಪಿಗೆ ಸೂಚಿಸಿದರು. ಈ ಬಗ್ಗೆ ಯಾವುದೇ ರೀತಿಯ ದೂರುಗಳು ದಾಖಲಾಗಿಲ್ಲ ಎಂದು ಠಾಣಾ ಅ ಧಿಕಾರಿಗಳು ಮಾಹಿತಿ ನೀಡಿದರು.