ರಾಜ್ಯದ ಹಿತಕ್ಕಾಗಿ ಒಗ್ಗಟ್ಟು : ಉದಯವಾಣಿ ವೇದಿಕೆಯಲ್ಲಿ ನೂತನ ಕೇಂದ್ರ ಸಚಿವರ ಸಮಾಗಮ
Team Udayavani, Jul 12, 2021, 7:30 AM IST
ಬೆಂಗಳೂರು : ರಾಜ್ಯದ ಹಿತ ಕಾಯುವ ಸಲುವಾಗಿ ದಿಲ್ಲಿ ಮಟ್ಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ…
-ಇದು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ಮೂವರು ನೂತನ ಸಚಿವರು ರಾಜ್ಯದ ಜನತೆಗೆ ನೀಡಿರುವ ಭರವಸೆ. “ಉದಯವಾಣಿ’ ರವಿವಾರ ಏರ್ಪಡಿಸಿದ್ದ ವರ್ಚುವಲ್ ಸಂವಾದದಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ ಮತ್ತು ಸಚಿವ ಭಗವಂತ ಖೂಬಾ ರಾಜ್ಯದ ಹಿತ ಕಾಯು ವೆವು ಎಂದರು.
ರಾಜ್ಯಕ್ಕೆ ಕೇಂದ್ರದಿಂದ ವಿವಿಧ ಯೋಜನೆಗಳು ಮತ್ತು ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಪ್ರಯತ್ನಿಸುವ ಭರವಸೆಯನ್ನು ಮೂವರೂ ಸಚಿವರು ನೀಡಿದರು.
ಕೃಷಿ ಯೋಜನೆ ತಲುಪಿಸುತ್ತೇನೆ
ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಕಿಸಾನ್ ಸಮ್ಮಾನ್ ಮತ್ತು ಕೃಷಿ ಸಮ್ಮಾನ್ ಯೋಜನೆಗಳು ಕಟ್ಟಕಡೆಯ ರೈತ ನಿಗೂ ತಲುಪುವಂತೆ ಮಾಡಲಾಗುವುದು. ಅಡಿಕೆ ಹಾನಿ ಕಾರಕ ಎಂದು ಯುಪಿಎ ಸರಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿದಾವಿತ್ ತೆರವು ಗೊಳಿಸುವಂತೆ ಆರೋಗ್ಯ ಸಚಿವರಿಗೆ ಮನವರಿಕೆ ಮಾಡಿ ಕೊಡಲಾಗುವುದು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಡ ಹೇರುತ್ತೇನೆ ಎಂದು ಶೋಭಾ ಹೇಳಿದರು.
ವಸತಿ ಶಾಲೆ ಆರಂಭ
ಪ್ರಧಾನಿ ಮೋದಿ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದ್ದಾರೆ. ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ನೀಡುತ್ತೇನೆ. ದೇಶಾದ್ಯಂತ ವಸತಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಪ್ರಯತ್ನಿಸುತ್ತೇನೆ. ಕರ್ನಾಟಕ ಸರಕಾರ ಜಾರಿಗೆ ತಂದಿರುವ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದು ನಾರಾಯಣಸ್ವಾಮಿ ಹೇಳಿದರು.
ಮೋದಿಯೇ ಪ್ರೇರಣೆ
ದಿನದ 24 ತಾಸು ಕೆಲಸ ಮಾಡುವ ಮೋದಿಯವರ ಕಾರ್ಯಶೈಲಿ ನನಗೆ ಪ್ರೇರಣೆ. ಅವರ ಆಶಯದಂತೆ ನಾವೆಲ್ಲರೂ ಕೆಲಸ ಮಾಡುತ್ತೇವೆ. ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡುವ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಭಗವಂತ ಖೂಬಾ ಹೇಳಿದರು.
ಕರ್ನಾಟಕದ ಸೇವೆ ಯಥಾ
ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವನಾಗಿ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 15 ವರ್ಷಗಳಿಂದ ರಾಜ್ಯದ ಜನರ ಸೇವೆಯ ಗೌರವ ನನಗೆ ದೊರೆತಿದೆ. ಇದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.