ಇಂದೂ ಮುಂದುವರೆದ ಸ್ವಾಮೀಜಿಗಳ ಸಿಎಂ ಭೇಟಿ: ಕಾವೇರಿ ನಿವಾಸದಲ್ಲಿ ಕಾವೇರಿದ ಚರ್ಚೆ
Team Udayavani, Jul 21, 2021, 11:53 AM IST
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಾರಕಕ್ಕೇರುತ್ತಿದ್ದಂತೆ ವಿವಿಧ ಮಠಾಧೀಶರು ಬಿ ಎಸ್ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಬಿಎಸ್ ವೈ ಪರವಾಗಿ ಬಹಿರಂಗ ಹೇಳಿಕೆ ನೀಡುತ್ತಿರುವ ಮಠಾಧೀಶರು ಮಂಗಳವಾರ ಸಿಎಂ ಭೇಟಿಯಾಗಿದ್ದರು. ಇಂದೂ ಹಲವು ಸ್ವಾಮೀಜಿಗಳು ಸಿಎಂ ನಿವಾಸ ಕಾವೇರಿಗೆ ಬಂದು ಬಿಎಸ್ ವೈ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸುತ್ತಿದ್ದಾರೆ.
ಯಾದಗಿರಿ ಮತ್ತು ಗುಲಬರ್ಗಾ ಭಾಗದಿಂದ ಮುಖ್ಯಮಂತ್ರಿಗಳ ಭೇಟಿಗಾಗಿ ಮಠಾಧೀಶರುಗಳು ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ. ಬೆಳಗ್ಗೆಯೇ ಸಿಎಂ ನಿವಾಸ ಕಾವೇರಿಗೆ ಆಗಮಿಸಿರುವ ಮಠಾಧೀಶರುಗಳು, ಬಿಎಸ್ ವೈ ಪರವಾಗಿ ತಾವಿದ್ದೇವೆ ಎಂದು ಸಂದೇಶ ರವಾನಿಸುತ್ತಿದ್ದಾರೆ.
ಇದನ್ನೂ ಓದಿ:CM ಸ್ಥಾನದಿಂದ ಬಿಎಸ್ವೈ ಪದಚ್ಯುತಿ ಮಾಡಿದರೆ ಬಿಜೆಪಿ ತಕ್ಕ ಶಾಸ್ತಿ ಅನುಭವಿಸಲಿದೆ:ಮನಗೂಳಿಶ್ರೀ
ಮಂಗಳವಾರ ಬಾಳೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಲಿಂಗಾಯತ ಶ್ರೀಗಳುಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದರು. ಸಿಎಂ ಭೇಟಿ ಬಳಿಕ ಮಾತನಾಡಿದ್ದ ದಿಂಗಾಲೇಶ್ವರ ಶ್ರೀಗಳು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಮುಂದಾದರೆ ಲಿಂಗಾಯತ ಸಮಾಜ ಬಿಜೆಪಿಯಿಂದ ದೂರವಾಗುತ್ತದೆ. ಹೀಗಾಗಿ ನಾವು ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಅವರನ್ನು ಮುಂದುವರಿಸುವಂತೆ ಮನವಿ ಮಾಡುತ್ತೇವೆ. ಈಗಲೂ ಕಾಲ ಮಿಂಚಿಲ್ಲ. ವರಿಷ್ಠರು ಎಚ್ಚೆತ್ತುಕೊಳ್ಳಬೇಕು. ಇಲ್ಲದೆ ಹೋದರೆ ಈ ಹಿಂದೆ ನಿಮಗಾದ ಪರಿಸ್ಥಿತಿ ಮತ್ತೆ ಬರುತ್ತದೆ. ಈ ಹಿಂದೆ ಅದನ್ನು ಬಿಜೆಪಿ ನೋಡಿದೆ. ಅದು ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದರು.