ಫೈಟರ್ ಸಾವಿಗೆ ಬೇಜವಾಬ್ದಾರಿಯೇ ಕಾರಣ; ಚಿತ್ರತಂಡದ ವಿರುದ್ಧ ಕಿಡಿಕಾರಿದ ನಟ ಅಜಯ್ ರಾವ್
Team Udayavani, Aug 9, 2021, 5:44 PM IST
ಬೆಂಗಳೂರು: ಬೇಜವಾಬ್ದಾರಿಯಿಂದಲೇ ಈ ದುರಂತ ಸಂಭವಿಸಿದೆ ಎಂದು ‘ಲವ್ ಯೂ ರಚ್ಚು’ ಚಿತ್ರದ ನಾಯಕ ಅಜಯ್ ರಾವ್ ಹೇಳಿದ್ದಾರೆ.
ಇಂದು ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿರುವ ಘಟನೆ ಕುರಿತು ಕಿಡಿಕಾರಿರುವ ಅಜಯ್, ಚಿತ್ರೀಕರಣದ ವೇಳೆ ಹೈಟೆನ್ ಶನ್ ವಿದ್ಯುತ್ ತಂತಿಗೆ ಮೆಟಲ್ ರೋಪ್ ಬಳಸಿ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ಶಾಕ್ ಹೊಡೆದು ದುರಂತ ಸಂಭವಿಸಿದೆ. ನಾನು 5 ದಿನಗಳ ಹಿಂದೆಯೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೆ. ನಾವು ಪ್ರಶ್ನೆ ಮಾಡಿದರೆ ಕೋಪಕ್ಕೆ ಗುರಿಯಾಗಬೇಕಾಗುತ್ತೆ, ಮೂಗು ತೂರಿಸುತ್ತಾರೆ ಅಂತಾರೆ. ಮುಂಜಾಗೃತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಘಟನೆ ಸಂಭವಿಸಿದೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.
ಘಟನೆ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ 200 ಮೀಟರ್ ದೂರದಲ್ಲಿದ್ದೆ. ದುರಂತದ ವೇಳೆ ಜೋರಾದ ಸೌಂಡ್ ಆಗಿದೆ ಎದ್ದು ನೋಡುವಷ್ಟರಲ್ಲಿ ಗುಂಪು ಸೇರಿತ್ತು. ನಮ್ಮ ಹುಡುಗರು ಮಾಹಿತಿ ನೀಡಿದರು. ನಾನು ಯಾರನ್ನೂ ದೂರುತ್ತಿಲ್ಲ, ಆದರೆ ಬೇಜವಬ್ದಾರಿ ಇಂತಹ ದುರಂತಕ್ಕೆ ಕಾರಣವಾಗುತ್ತಿದೆ. ಹಾಗಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಚಿತ್ರದಲ್ಲಿ ನಟ ಅಜಯ್ ರಾವ್ ಹಾಗೂ ನಟಿ ರಚಿರಾ ರಾಮ್ ನಟಿಸುತ್ತಿದ್ದಾರೆ. ಶಂಕರ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.
ಮೂವರ ಬಂಧನ :
ಇನ್ನು ಘಟನೆಗೆ ಸಂಬಂಧಪಟ್ಟಂತೆ ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಸಾಹಸ ವಿನೋದ್, ನಿರ್ಮಾಪಕ ಗುರುದೇಶಪಾಂಡೆ ಅವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ 304, 308 ಅಡಿಯಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.