ಬಸ್ ಸಂಪರ್ಕದ ಬೇಡಿಕೆ ಇನ್ನೂ ಈಡೇರಿಲ್ಲ
Team Udayavani, Aug 13, 2021, 3:00 AM IST
ಬಂಟ್ವಾಳ ತಾಲೂಕು ಕೇಂದ್ರದ ಸಮೀಪ ಇರುವ ಅಮಾrಡಿ ಗ್ರಾಮ ಸಾಕಷ್ಟು ಮೂಲ ಸೌಕರ್ಯ ಹೊಂದಿದ್ದರೂ ಕಪ್ಪು ಚುಕ್ಕೆ ಎಂಬಂತೆ ಇಲ್ಲಿನ ಬಸ್ ಓಡಾಟದ ಬೇಡಿಕೆ ಇನ್ನೂ ಈಡೇರಿಲ್ಲ. ಉದ್ಯೋಗಿಗಳು, ಕೆಲಸ ಕಾರ್ಯಗಳಿಗಾಗಿ ಸಂಚರಿಸುವವರು, ವಿದ್ಯಾರ್ಥಿಗಳು ಇತರ ವಾಹನಗಳಿಗೆ ಕಾಯಬೇಕಾದ ಅನಿವಾರ್ಯತೆ ಇದೆ. ಇಂದಿನ “ಒಂದು ಊರು; ಹಲವು ದೂರು’ ಅಂಕಣದಲ್ಲಿ ಅಮ್ಟಾಡಿ ಗ್ರಾಮದ ಚಿತ್ರಣ.)
ಬಂಟ್ವಾಳ: ತಾಲೂಕು ಕೇಂದ್ರಕ್ಕೆ ಸಮೀಪವಿರುವ ಗ್ರಾಮ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡು ಸಾಕಷ್ಟು ಮೂಲ ಸೌಕರ್ಯವಿದ್ದರೂ, ಈ ಗ್ರಾಮಕ್ಕೆ ಬಸ್ನ ಸೌಕರ್ಯ ಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಹೀಗಾಗಿ ವಾಹನವಿಲ್ಲದೆ ಇರುವ ಗ್ರಾಮಸ್ಥರು ಕಾಲ್ನಡಿಗೆ ಅಥವಾ ಆಟೋ ರಿಕ್ಷಾದಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ.
ಇದು ಅಮಾrಡಿ ಗ್ರಾಮದ ಕಥೆ. ಈ ಗ್ರಾಮದ ಕೆಂಪುಗುಡ್ಡೆ, ಕಾಯರ್ಮಾರ್, ಬಾಂಬಿಲ, ನಲ್ಕೆಮಾರ್, ಮಂಗ್ಲಿಮಾರ್ ಪ್ರದೇಶಗಳ ಮಂದಿ ತಮ್ಮ ಯಾವುದೇ ಕೆಲಸಗಳಿಗೆ ಬಂಟ್ವಾಳ ಪೇಟೆ ಹಾಗೂ ಬಿ.ಸಿ.ರೋಡ್ ಅನ್ನು ಸಂಪರ್ಕಿಸಬೇಕಿದ್ದು, ಬಸ್ನ ವ್ಯವಸ್ಥೆಯಿಲ್ಲದೆ ಇತರ ವಾಹನಗಳಿಗೆ ಕಾಯಬೇಕಾದ ಅನಿವಾರ್ಯತೆ ಇದೆ.
ಬಂಟ್ವಾಳದ ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ರಸ್ತೆ ಕಾಮಗಾರಿಯು ಕೇಂದ್ರೀಯ ರಸ್ತೆ ನಿಧಿ ಯೋಜನೆ ಮೂಲಕ ಅಭಿವೃದ್ಧಿಗೊಂಡಿದ್ದು, ಇಲ್ಲಿಂದ ಬಿ.ಸಿ.ರೋಡ್-ಪೊಳಲಿ ರಸ್ತೆಯ ಕಲ್ಪನೆಗೆ ಕೇವಲ 8 ಕಿ.ಮೀ. ದೂರ ಇದೆ. ಬಿ.ಸಿ.ರೋಡ್ ಅನ್ನೂ ಸಂಪರ್ಕಿಸುವುದಾದರೂ, 5-6 ಕಿ.ಮೀ. ದೂರವಿದೆ. ಹೀಗಾಗಿ ನಿತ್ಯ ಶಾಲೆ-ಕಾಲೇಜು ಸೇರಿದಂತೆ ದೈನಂದಿನ ಇತರ ಕೆಲಸಕ್ಕೆ ಹೋಗುವವರು ಇತರ ವಾಹನಗಳನ್ನು ಕಾದು ಅಥವಾ ಕಾಲ್ನಡಿಗೆಯಲ್ಲೇ ಸಾಗಬೇಕಿದೆ.
ಕನಿಷ್ಠ ಪಕ್ಷ ದಿನದ ಎರಡು ಹೊತ್ತಾದರೂ ಸರಕಾರಿ ಬಸ್ ಓಡಾಡಿದರೆ ಈ ಭಾಗದ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಈ ಪ್ರದೇಶವು ನಗರಕ್ಕೆ ಹತ್ತಿರದಲ್ಲಿರುವ ಕಾರಣದಿಂದ ಸರಕಾರಿ ಬಸ್ಗೆ ಪ್ರಯಾಣಿಕರ ಕೊರತೆ ಎದುರಾದರೂ ಹೆಚ್ಚು ನಷ್ಟವಾಗದು. ಬಿ.ಸಿ.ರೋಡ್ನಿಂದ ಹೊರಟು ಗ್ರಾಮದ ಪ್ರಮುಖ ಪ್ರದೇಶಕ್ಕೆ ತೆರಳಿ ಮತ್ತೆ ಹಿಂತಿರುಗಿದರೂ, ಒಂದಷ್ಟು ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂಬುದು ಕೆಲವರ ಅಭಿಪ್ರಾಯ.
ರಸ್ತೆಯ ಸಮಸ್ಯೆಯೂ ಇದೆ:
ಅಮ್ಟಾಡಿ ಗ್ರಾಮದಲ್ಲಿ ಕೆಲವೊಂದು ರಸ್ತೆಗಳು ಕೂಡ ಅವ್ಯವಸ್ಥೆಯಿಂದ ಕೂಡಿದ್ದು, ಅದಕ್ಕೂ ಪರಿಹಾರ ಕಲ್ಪಿಸಬೇಕಿದೆ. ನಲ್ಕೆಮಾರು ದ್ವಾರದಿಂದ ಅಮಾrಡಿ ಸೊಸೈಟಿ ರಸ್ತೆ, ಕಜಿಪಿತ್ಲುವಿನಿಂದ ತಡ್ಯಾಲ್ಗುಡ್ಡೆ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಸಂಚಾರ ದುಸ್ತರವೆನಿಸಿದೆ. ಈ ರಸ್ತೆಯಲ್ಲಿ ಹೆಚ್ಚಾಗಿ ಘನ ವಾಹನಗಳು ಸಂಚರಿಸದೇ ಇದ್ದರೂ ಕೂಡ ರಸ್ತೆ ಸ್ಥಿತಿ ಅವ್ಯವಸ್ಥೆಯಲ್ಲಿದೆ.
ಚರಂಡಿಯ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಮರ್ಪಕ ನಿರ್ವಹಣೆಯಿಲ್ಲದೆ ಈ ದುಸ್ಥಿತಿಗೆ ತಲುಪಿದೆ. ಈ ಹಿಂದೆ ರಸ್ತೆಯ ಅವ್ಯವಸ್ಥೆಗೆ ತಾತ್ಕಾಲಿಕ ಪರಿಹಾರವಾಗಿ ಕಲ್ಲುಗಳನ್ನು ಹಾಕಲಾಗಿದ್ದು, ಅವುಗಳು ಒಂದು ತಿಂಗಳಲ್ಲೇ ಎದ್ದು ಹೋಗಿವೆ. ಅಮ್ಟಾಡಿ ಗ್ರಾಮಕ್ಕೆ ನಲ್ಕೆಮಾರ್-ತಡ್ಯಾಲ್ ರಸ್ತೆ ಅತಿಮುಖ್ಯ ರಸ್ತೆಯಾಗಿದ್ದು, ಹೀಗಾಗಿ ಈ ಭಾಗದ ಮಂದಿ ರಸ್ತೆ ದುರಸ್ತಿಗಾಗಿ ಆಗ್ರಹಿಸುತ್ತಿದ್ದಾರೆ.
ಗುಡ್ಡ ಕುಸಿಯುವ ಭೀತಿ :
ಗ್ರಾಮದ ಕೆಂಪುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಬಳಿ ಗುಡ್ಡ ಕುಸಿಯುವ ಭೀತಿ ಇದ್ದು, ಒಂದಷ್ಟು ಮನೆಗಳಿಗೂ ತೊಂದರೆಯಾಗಲಿದೆ. ಕೆಂಪುಗುಡ್ಡೆ ಜಂಕ್ಷನ್ನಿಂದ ಕಜಿಪಿತ್ಲು, ತಡ್ಯಾಲ್ಗುಡ್ಡೆ, ನಲ್ಕೆಮಾರ್ ರಸ್ತೆಯು ಪ್ರಾಥಮಿಕ ಶಾಲೆಯ ಹಿಂಬದಿಯಿಂದ ಬೀಳುವ ಮಣ್ಣಿನಿಂದ ರಸ್ತೆ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆಯೂ ಇದೆ. ಗ್ರಾಮದ ಇತರ ಭಾಗಗಳಲ್ಲೂ ಗುಡ್ಡ ಕುಸಿಯುವ ಭೀತಿ ಇದ್ದು, ಅದಕ್ಕೂ ಒಂದಷ್ಟು ಪರಿಹಾರ ಕಾರ್ಯಗಳಾಗಬೇಕಿದೆ.
ಇತರ ಸಮಸ್ಯೆಗಳೇನು? :
- ಒಂದಷ್ಟು ಪ್ರದೇಶಗಳಲ್ಲಿ ನೀರಿನ
- ಕೊರತೆಯೂ ಇದೆ
- ಕಜಿಪಿತ್ಲು ಪ್ರದೇಶದಲ್ಲಿ ಇನ್ನೂ ನೀರಿನ ಪೈಪ್ ಸಂಪರ್ಕಕ್ಕೆ ಆಗಿಲ್ಲ
-ಕಿರಣ್ ಸರಪಾಡಿ