ಹರಿವ ಕಾಲುವೆಗೆ ಜಿಗಿದು ಮೃತದೇಹ ಹೊರತೆಗೆದ ಪಿಎಸೈ
Team Udayavani, Aug 17, 2021, 1:10 PM IST
ರಟ್ಟಿಹಳ್ಳಿ: ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಮೃತ ದೇಹವನ್ನು ಕಾಲುವೆಯಿಂದ ಮೇಲೆತ್ತಲೂ ಎಲ್ಲರೂ ಹಿಂದೇಟು ಹಾಕುತ್ತಿದ್ದಾಗ ಸ್ವತಃ ಪಿಎಸ್ಐ ಮೃತದೇಹವನ್ನು ಮೇಲೆತ್ತಿ ಸಾರ್ವನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಟ್ಟಣದ ಪಿಎಸ್ಐ ಕೃಷ್ಣಪ್ಪ ತೋಪಿನ ಈ ಶ್ಲಾಘನೆಗೆ ಪಾತ್ರರಾದವರು. ತಾಲೂಕಿನ ಮಕರಿ ಗ್ರಾಮದ ಬಳಿ ಇರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾಗಿತ್ತು. ಆದರೆ ಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಕಾಲುವೆಗೆ ಇಳಿದು ಮೃತದೇಹ ತೆಗೆಯಲು ಯಾರು ಇಳಿದಿರಲಿಲ್ಲ. ಮೃತದೇಹ ಇದ್ದ ಸ್ಥಳಕ್ಕೆ ಹೋಗಲು ಅಗ್ನಿಶಾಮಕ ವಾಹನಕ್ಕೆ ದಾರಿಯೂ ಇರಲಿಲ್ಲ. ಸಮಯ ಕಳೆದಂತೆ ಮತ್ತೆ ಕತ್ತಲಾಗುತ್ತದೆ, ಮುಂದಿನ ವಿಚಾರಣೆಗೆ ತೊಂದರೆಯಾಗುತ್ತದೆ ಎಂಬುವುದನ್ನು ಅರಿತು ಹಲವರಿಗೆ ನೀರಿಗೆ ಇಳಿಯುವಂತೆ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಸ್ವತಃ ಪಿಎಸ್ಐ ಕಾಲುವೆಗೆ ಧುಮುಕಿ ಮೃತ ದೇಹ ಮೇಲಕ್ಕೆತ್ತಿದ್ದಾರೆ.
ಮೃತದೇಹದ ಬಳಿ ಹೋದಾಗ ಆಗಲೇ ಶವ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಸ್ವಲ್ಪ ತೊಂದರೆಯಾಯಿತು. ಆದರೆ ಅದೇ ಸಮಯಕ್ಕೆ ನಾನು ಇಳಿದ ಮೇಲೆ ಮಕರಿ ಗ್ರಾಮದ ಚಂದ್ರಪ್ಪ ಎಂಬುವ ವ್ಯಕ್ತಿಯೂ ನೀರಿಗೆ ಇಳಿದು ಶವ ತರಲು ಸಹಾಯ ಮಾಡಿದ ಎಂದು ಪಿಎಸ್ಐ ಕೃಷ್ಣಪ್ಪ ತೋಪಿನ ಸ್ಮರಿಸಿದರು.