ಹಿರಿಯ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆ ಸೌಂದರ್ಯ ಹೆಚ್ಚಳ
ಸರ್ಕಾರಿ ಶಾಲೆಗೆ ಸ್ಮಾಟ್ಕ್ಲಾಸ್ ಆಳವಡಿಕೆ ಸ್ವಂತ ಹಣದಲ್ಲಿ ಶಾಲೆಗೆ ಕಾಯಕಲ್ಪ
Team Udayavani, Sep 17, 2021, 4:56 PM IST
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಂದಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಚಿತ್ರಣವನ್ನೇ ಹಿರಿಯ ವಿದ್ಯಾರ್ಥಿಗಳು
ಬದಲಾಯಿಸಿದ್ದಾರೆ. 1914ನೇ ಇಸವಿಯಲ್ಲಿ ಪ್ರಾರಂಭವಾದ ಶಾಲೆಗೆ ಹೊಸ ಕಾಯಕಲ್ಪ ನೀಡಿ, ವಿದ್ಯಾರ್ಥಿಗಳಿಗೆ ಆರೋಗ್ಯಕರ ವಾತಾವರಣ
ನಿರ್ಮಿಸುವ ಮೂಲಕ ಓದಿದ ಶಾಲೆಗೆ ಗೌರವ ನೀಡಿದ್ದಾರೆ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಕೋವಿಡ್ ಲಾಕ್ಡೌನ್ನಿಂದ ಸರ್ಕಾರಿ ಶಾಲೆಗಳ ಬೆಲೆ ಹಾಗೂ ಗುಣಮಟ್ಟದ ಬಗ್ಗೆ ಬಹುತೇಕ ಪೋಷಕರಿಗೆ ತಿಳಿಯುತ್ತಿದೆ. ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇರಬಾರದು ಎಂಬ ಮನಸ್ಥಿತಿಯಲ್ಲಿ 107 ವರ್ಷಗಳ
ಹಳೆಯದಾದ ಶಾಲೆಗೆ ಸಂಪೂರ್ಣ ಆಕರ್ಷಕವಾದ ಬಣ್ಣ ಹೊಡೆದು, ಶಾಲೆಯನ್ನು ರಿಪೇರಿ ಮಾಡುವ ಮೂಲಕ ಶಾಲೆಯನ್ನು ಹೊಸ ರೂಪಕ್ಕೆ ತಂದು ನಿಲ್ಲಿಸಿದ್ದಾರೆ.
ಸ್ಮಾರ್ಟ್ ಕ್ಲಾಸ್ ಆಳವಡಿಕೆ: ಯಾವ ಖಾಸಗಿ ಶಾಲೆಗೂ ಹಳ್ಳಿಯ ಸರ್ಕಾರಿ ಶಾಲೆಗಳು ಕಡಿಮೆ ಇರಬಾರದು ಎಂಬ ಉದ್ದೇಶದಿಂದ ಶಾಲೆ ಹಿರಿಯ ವಿದ್ಯಾರ್ಥಿಯೊಬ್ಬರು, ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚಿಸಲು ಶಾಲೆಗೆ ಸ್ಮಾರ್ಟ್ಕ್ಲಾಸ್ ಆಳವಡಿಕೆ ಮಾಡಲಾಗುತ್ತಿದೆ. ಶಾಲೆಗೆ ಕಂಪ್ಯೂಟರ್, ಪ್ರಿಂಟಿರ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ವಿವಿಧ ಸೌಲಭ್ಯವನ್ನು ಹಿರಿಯ ವಿದ್ಯಾರ್ಥಿಗಳು ನೀಡಿದ್ದಾರೆ.
ಇದನ್ನೂ ಓದಿ:ಪರಭಾಷೆಗೆ ಹೋಗುವಾಗ ಅಳುಕು-ಭಯ ಸಹಜ…: ಕಂಫರ್ಟ್ ಲೆವೆಲ್ನಿಂದ ಹೊರಬಂದ ಆಶಿಕಾ ಮಾತು
ಮಾಸಿದ ಶಾಲೆಗೆ ಹೊಸ ರೂಪ: ಸರ್ಕಾರಿ ಶಾಲೆಗಳು ಎಂದರೇ ತಟ್ ಅಂತ ಕಣ್ಣ ಮುಂದೆ ಬರುವುದೆ ಹಳೇ ಅಂಚಿನ ಛಾವಣಿ, ಹಳೆಯದಾದ ಬಾಗಿಲು, ಕಿಟಕಿ,ಮುರಿಯುವ ಸ್ಥಿತಿಯ ಗೇಟ್, ಮಾಸಿ ಹೋಗಿರುವ ಬಣ್ಣ. ಆದರೆ, ಇದೇ ಸ್ಥಿತಿಯಲ್ಲಿದ್ದ ಶಾಲೆಯನ್ನು, ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಿಂದ ಶಾಲೆಗೆ ವಿವಿಧ ಬಣ್ಣಗಳಿಂದ ಶೃಂಗರಿಸಿ, ವಿವಿಧ ಚಿತ್ರಗಳನ್ನು ಗೋಡೆ ಮೇಲೆ ಬರೆಸಿ, ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಹಳ್ಳಿಯ ಸರ್ಕಾರಿ ಶಾಲೆಗೆ ಹೊಸ ರೂಪದಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆಧುನಿಕದಲ್ಲಿ ಹಳ್ಳಿ ಮಕ್ಕಳು ಓದಿನಲ್ಲಿ ಪೈಪೋಟಿಗೆ ಅನುಕೂಲವಾಗಿದೆ. ಕೋವಿಡ್ ನಂತರ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದು, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
-ಕಾತ್ಯಾಹಿನಿ, ಶಿಕ್ಷಣಾಧಿಕಾರಿ, ಚಿ.ನಾ.ಹಳ್ಳಿ
-ಚೇತನ್