ಪಾರ್ಕ್ಗಳಲ್ಲಿ ನಾಯಿಗಳ ಮಲ-ಮೂತ್ರ ಕಿರಿಕಿರಿ: ಪಾಲಿಕೆಗೆ ನೋಟಿಸ್
Team Udayavani, Sep 30, 2021, 4:49 PM IST
ಬೆಂಗಳೂರು: ಸಾರ್ವಜನಿಕ ಉದ್ಯಾನಗಳಿಗೆ ಸಾಕು ನಾಯಿಗಳನ್ನು ಕರೆದುಕೊಂಡು ಬರುವ ಅವುಗಳ ಮಾಲೀಕರು ಮತ್ತು ಪೋಷಕರು ಅವುಗಳ ಜೊತೆಗೆ “ಬಯೋಡಿಗ್ರೇಡೆಬಲ್ ಪೂಪ್ ಬ್ಯಾಗ್’ (ಜೈವಿಕ ವಿಘಟನೀಯ ಕೊಳೆ ಚೀಲ) ತರುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಪಾಲಿಕೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು “ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್’ (ಕ್ಯುಪಾ) ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ರೇಬಿಸ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಬಿಬಿಎಂಪಿ ಪಶುಪಾಲನಾ ವಿಭಾಗ, ರೋಟರಿ ಸಂಸ್ಥೆ ಹಾಗೂ ಮಿಷನ್ ರೇಬಿಸ್ ವತಿಯಿಂದ ಹಮ್ಮಿಕೊಂಡಿರುವ ರೇಬಿಸ್ ಜಾಗೃತಿ ಕಾರ್ಯಕ್ರಮಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಚಾಲನೆ ನೀಡಿದರು. ರೇಬಿಸ್ಗೆ ತುತ್ತಾಗಿರುವ ಪ್ರಾಣಿಗಳನ್ನು ಸಾಗಿಸಲು ಮತ್ತು ರೇಬಿಸ್ ಶಂಕಿತ ಪ್ರಾಣಿಗಳನ್ನು ಬೇರ್ಪಡಿಸಲು ಎರಡು ಆ್ಯಂಬುಲೆನ್ಸ್ ವಾಹನಗಳನ್ನು ರೋಟರಿ ಕ್ಲಬ್ ಬೆಂಗಳೂರು ಸದ್ಯದ ನೀಡಲಿದ್ದಾರೆ. ಜೊತೆಗೆ ರೋಟರಿ ಕ್ಲಬ್ ಬೆಂಗಳೂರು ರವರು ನಗರದ ನಾಗರಿಕರಲ್ಲಿ ರೇಬಿಸ್ ಬಗ್ಗೆ ಜಾಗೃತಿ ಮೂಡಿಸಲು ನಗರದಾದ್ಯಂತ ಬೀದಿ ನಾಟಕ, ಸಾಮಾಜಿಕ ಜಾಲ ತಾಣಗಳಲ್ಲಿ ರೇಬಿಸ್ ಬಗ್ಗೆ ಜಾಗೃತಿ ಮೂಡಿಸುವುದು, ಬಸ್-ಆಟೋಗಳು, ಹೋಟೆಲ್ , ಉದ್ಯಾನಗಳಲ್ಲಿ ಕರಪತ್ರ, ಬಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.