“ಆತ ಗೆಲ್ಲಲು ನಾನು ಬಿಡುವುದಿಲ್ಲ” : ಸಿಧು ವಿರುದ್ಧ ಸಮರ ಸಾರಿದ ಕ್ಯಾಪ್ಟನ್
Team Udayavani, Sep 30, 2021, 9:13 PM IST
ನವದೆಹಲಿ: ಕಾಂಗ್ರೆಸ್ ಪಕ್ಷ ತೊರೆಯಲು ತುದಿಗಾಲಿನ ಮೇಲೆ ನಿಂತಿರುವ ಹಿರಿಯ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ನವಜೋತ್ ಸಿಂಗ್ ಸಿಧು ಅವರ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.
ಇಂದು ಮಾಧ್ಯಮಗಳ ಎದುರು ಮಾತನಾಡಿದ ಕ್ಯಾಪ್ಟನ್, ಸಿಧು ವಿರುದ್ಧ ವಾಗ್ದಾಳಿ ನಡೆಸಿದರು. ಸಿಧು ರಾಜ್ಯಕ್ಕೆ ತಕ್ಕನಾದ ವ್ಯಕ್ತಿಯಲ್ಲ. ಆತ ಮುಂದಿನ ಚುನಾವಣೆಯಲ್ಲಿ ಎಲ್ಲೇ ಸ್ಪರ್ಧಿಸಿದರೂ ಆತನನ್ನು ಸೋಲಿಸುತ್ತೇನೆ. ಆತ ಗೆಲ್ಲಲು ನಾನು ಬಿಡುವುದಿಲ್ಲ ಎಂದಿದ್ದಾರೆ.
‘ತಾನು ಕಾಂಗ್ರೆಸ್ ಜೊತೆಗೆ ಇಲ್ಲ’ ಎಂದಿರುವ ಅಮರಿಂದರ್ ಸಿಂಗ್ , ‘ನಾನು ಕಾಂಗ್ರೆಸ್ನಲ್ಲಿ ಉಳಿಯುತ್ತಿಲ್ಲ ಹಾಗೇ ಬಿಜೆಪಿಗೂ ಸೇರುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು. ಪಂಜಾಬ್ನ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಪಂಜಾಬ್ ಕಾಂಗ್ರೆಸ್ ಸರ್ಕಾರವು ಬಹುಮತ ಕಳೆದುಕೊಂಡರೆ, ವಿಧಾನಸಭೆಯ ಸ್ಪೀಕರ್ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿಯಾದ ಅಮರಿಂದರ್ ಅವರು ಭದ್ರತೆಗೆ ಸಂಬಂಧಿತ ವಿಚಾರಗಳನ್ನು ಚರ್ಚಿಸಿದ್ದು, ಅವುಗಳನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಬೆಳವಣಿಗೆಗಳ ನಡುವೆ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರೊಂದಿಗೆ ಚಂಡೀಗಡದ ಪಂಜಾಬ್ ಭವನದಲ್ಲಿ ಮಾತುಕತೆ ನಡೆಸಿದ್ದಾರೆ.