ಇಲ್ಲಿ ನೋಡಿ : ಆಸ್ಪತ್ರೆಗೆ ದಾಖಲಿಸಿದರೆ 5 ಸಾವಿರ ಬಹುಮಾನ
ಕೇಂದ್ರ ಸರಕಾರದ ಸುತ್ತೋಲೆ; ರಸ್ತೆ ಅಪಘಾತ ಪ್ರಕರಣಗಳಿಗೆ ಮಾತ್ರ ಅನ್ವಯ
Team Udayavani, Oct 7, 2021, 6:30 AM IST
ಹೊಸದಿಲ್ಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸುವ ಪರೋಪಕಾರಿ (ಸಮಾರಿಟನ್)ಗಳಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವು ನೀಡಲು ಹಿಂದೇಟು ಹಾಕುವ ಪ್ರವೃತ್ತಿಯನ್ನು ದೂರ ಮಾಡಲು ಕೇಂದ್ರ ರಸ್ತೆ ಸಾರಿಗೆ ಸಚಿ ವಾಲಯ ಈ ಹೊಸ ಕ್ರಮಕ್ಕೆ ಮುಂದಾಗಿದೆ.
ಅ. 15ರಿಂದ ಈ ಯೋಜನೆ ಆರಂಭವಾಗಲಿದ್ದು, 2026ರ ಮಾರ್ಚ್ ವರೆಗೆ ಜಾರಿಯಲ್ಲಿರುತ್ತದೆ. ಅಪಘಾತ ಸಂಭವಿಸಿ 1 ಗಂಟೆಯೊಳಗೆ ಗಾಯಾಳು ಗಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಲು ನೆರವು ನೀಡುವ ಮಹತ್ವದ ಕ್ರಮ ಇದಾಗಿದೆ.
ಬಹುಮಾನದ ಜತೆ ಪ್ರಶಂಸಾ ಪತ್ರವೂ ಸಿಗುತ್ತದೆ. ಒಂದು ವೇಳೆ ನಿಗದಿತ ಪ್ರಕರಣಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರೆ 5 ಸಾವಿರ ರೂ. ಬಹುಮಾನದ ಮೊತ್ತವನ್ನು ಸಮನಾಗಿ ಹಂಚ ಲಾಗುತ್ತದೆ. ಜತೆಗೆ ರಾಷ್ಟ್ರಮಟ್ಟದಲ್ಲಿ ಕೂಡ ಹತ್ತು ಉತ್ತಮ ಪರೋಪಕಾರಿ (ಸಮಾರಿಟನ್) ವ್ಯಕ್ತಿಗಳಿಗೆ ವಾರ್ಷಿಕವಾಗಿ 1 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುತ್ತದೆ.
ಇದನ್ನೂ ಓದಿ:ಐಪಿಎಲ್: ಸನ್ರೈಸರ್ ಹೈದರಾಬಾದ್ಗೆ ಗೆಲುವಿನ ಸಮಾಧಾನ
ಕೇಂದ್ರದ ನಿಯಮಗಳ ಪ್ರಕಾರ ಅಪಘಾತದ ಬಗ್ಗೆ ಸಮೀಪದ ಠಾಣೆಗೆ ಮಾಹಿತಿ ನೀಡಿದರೆ, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರ ಜತೆಗೆ ಪೊಲೀಸರು ಮಾಹಿತಿ ಖಚಿತಪಡಿಸಿ, ಮಾಹಿತಿ ಸ್ವೀಕೃತಿ ನೀಡುತ್ತಾರೆ. ಅದನ್ನು ಜಿಲ್ಲಾಧಿಕಾರಿ ನೇತೃತ್ವದ ಪರಿಶೀಲನ ಸಮಿತಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಪರೋಪಕಾರಿಗಳು ಗಾಯಾಳುಗಳನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿದರೆ, ವೈದ್ಯರೇ ನಿಗದಿತ ಠಾಣಾ ವ್ಯಾಪ್ತಿಗೆ ಮಾಹಿತಿ ನೀಡುತ್ತಾರೆ. ಆಗಲೂ ಪೊಲೀಸರು ಮಾಹಿತಿ ಸ್ವೀಕೃತಿ ಪತ್ರ ನೀಡುತ್ತಾರೆ ಮತ್ತು ಅದನ್ನು ಜಿಲ್ಲಾ ಸಮಿತಿಗೆ ಕಳುಹಿಸಿಕೊಡುತ್ತಾರೆ.
ಜಿಲ್ಲಾ ಮಟ್ಟದ ಸಮಿತಿ ಪ್ರತೀ ತಿಂಗಳು ಈ ಬಗ್ಗೆ ಮಾಹಿತಿ ಪರಿಶೀಲಿಸಲಿದೆ. ಅದನ್ನು ರಾಜ್ಯಗಳಲ್ಲಿರುವ ಸಾರಿಗೆ ಇಲಾಖೆ ಆಯುಕ್ತರಿಗೆ ಕಳುಹಿಸಿ, ಬಹುಮಾನ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗುತ್ತದೆ.