ಅಡಿಕೆ ಹಳದಿ ಎಲೆ ರೋಗ ಸಮಸ್ಯೆ: ಹೊಸ ತಳಿ ಅಭಿವೃದ್ಧಿಯತ್ತ ಚಿತ್ತ
ಪರ್ಯಾಯ ಬೆಳೆಗಾಗಿ ಶೂನ್ಯ ಬಡ್ಡಿ ಸಾಲಕ್ಕೆ ಸಂತ್ರಸ್ತರ
Team Udayavani, Oct 10, 2021, 6:05 AM IST
ಮೊರೆಪುತ್ತೂರು: ಅಡಿಕೆ ಹಳದಿ ಎಲೆ ರೋಗಕ್ಕೆ ಔಷಧ ಹಾಗೂ ಆಗಿರುವ ನಷ್ಟಕ್ಕೆ ಪರಿಹಾರ ದೊರೆಯದೆ ಬೆಳೆಗಾರರು ಸಂತ್ರಸ್ತರಾಗಿರುವ ಹೊತ್ತಿನಲ್ಲಿ ಹಳದಿ ರೋಗ ನಿರೋಧಕ ಶಕ್ತಿಯುಳ್ಳ ತಳಿ ಅಭಿವೃದ್ಧಿಗೆ ಸಿಪಿಸಿಆರ್ಐ ವಿಜ್ಞಾನಿಗಳು ಮುಂದಾಗಿದ್ದಾರೆ.
ಸುಳ್ಯದ ಸಂಪಾಜೆ, ಅರಂತೋಡು, ಮರ್ಕಂಜದಲ್ಲಿ ಕಾಣಿಸಿಕೊಂಡಿದ್ದ ಹಳದಿ ರೋಗ ಜಿಲ್ಲೆ ಹಾಗೂ ಹೊರ ಜಿಲ್ಲೆಯ ತೋಟಗಳಿಗೆ ಹರಡುತ್ತಿದೆ. ರೋಗಕ್ಕೆ ಫೈಟೋಪ್ಲಾಸ್ಮಾ ಎಂಬ ವೈರಸ್ ಮತ್ತು ಹರಡುವಿಕೆಗೆ ಜಿಗಿ ಹುಳ ಕಾರಣ ಎಂದು ಗುರುತಿಸಲಾ ಗಿದ್ದರೂ ಶಾಶ್ವತ ಔಷಧ ಪತ್ತೆಯಾಗಿಲ್ಲ.
ಶೂನ್ಯ ಬಡ್ಡಿ ಸಾಲಕ್ಕೆ ಆಗ್ರಹ
ಸರಕಾರ ಘೋಷಿಸಿದ ಅನುದಾನ ದಲ್ಲಿ ರೋಗ ಪೀಡಿತ ಪ್ರದೇಶದಲ್ಲಿ ಪರ್ಯಾಯ ಬೆಳೆಗಾಗಿ ಸಹಕಾರ ಸಂಘಗಳ ಮೂಲಕ ದೀರ್ಘಾವಧಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡ ಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಬೆಳೆ ನಷ್ಟವಾದ ಕಾರಣ ಕೃಷಿಕರು ಆದಾಯವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ತಳಿ ಅಭಿವೃದ್ಧಿಯ ಪ್ರಯತ್ನದ ಫಲಿತಾಂಶ ಬರಲು ಕನಿಷ್ಠ ನಾಲ್ಕು ವರ್ಷ ಬೇಕು. ಹೀಗಾಗಿ ಸರಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ತಳಿ ಅಭಿವೃದ್ಧಿಯ ಜತೆಗೆ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎನ್ನುತ್ತಾರೆ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹೇಶ್ ಪುಚ್ಚಪ್ಪಾಡಿ.
ಅಂದು 750 ಕ್ವಿಂ.
ಇಂದು 350 ಕ್ವಿಂ.!
ಸಂಪಾಜೆ ಕ್ಯಾಂಪ್ಕೋ ಶಾಖೆಗೆ 2013ರಲ್ಲಿ ಪೂರೈಕೆ ಆಗುತ್ತಿದ್ದ 750 ಕ್ವಿಂಟಾಲ್ ಅಡಿಕೆ ಈಗ 350 ಕ್ವಿಂಟಾಲ್ಗೆ ಇಳಿದಿರುವುದು ರೋಗದ ತೀವ್ರತೆಗೆ ಉದಾಹರಣೆ.
ತಳಿ ಅಭಿವೃದ್ಧಿ ಹೇಗೆ ?
ಸಂಪಾಜೆಯನ್ನು ಹಳದಿ ರೋಗದ ಮೂಲವೆಂದು ಗುರುತಿಸಿದ್ದು, ಅಲ್ಲಿ ಹಲವು ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು. ಕನಿಷ್ಠ 25 ವರ್ಷಗಳಿಂದ ರೋಗ ಕಾಣಿಸಿಕೊಳ್ಳುತ್ತಿದ್ದರೂ ಅಂತಹ ತೋಟಗಲ್ಲಿ ಇನ್ನೂ ಹಸಿರಾಗಿ ಉಳಿದಿರುವ ಮರಗಳನ್ನು ಗುರುತಿಸಿ ಅವುಗಳ ಮೂಲಕ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಯೋಜನೆ. ಹಸುರಾಗಿರುವ ಮರಗಳಲ್ಲಿ ರೋಗದ ಪ್ರಭಾವ ವನ್ನು ಪ್ರಾಯೋಗಿಕವಾಗಿ ಅರಿತುಕೊಂಡು ಹಿಂಗಾರ ಬರುವ ಸಮಯದಲ್ಲಿ ಅಂತಹ ಮರಗಳಿಂದ ಪಾಲಿನೇಶನ್ ಮಾಡಿಸಿ ಅಡಿಕೆಯನ್ನು ಪಡೆದು ಅದರಲ್ಲಿ ಗುಣಮಟ್ಟದ ಅಡಿಕೆಯನ್ನು ನಾಟಿ ಮಾಡುವ ಮೂಲಕ ರೋಗ ನಿರೋಧಕ ತಳಿ ಅಭಿವೃದ್ಧಿ ಸಾಧ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕೊರೊನಾ ಮಾತಾ ದೇಗುಲ : ಅರ್ಜಿದಾರನಿಗೇ ದಂಡ ವಿಧಿಸಿದ ಸುಪ್ರೀಂಕೋರ್ಟ್
ಘೋಷಿಸಿರುವ 25 ಕೋ.ರೂ.ಗಳಲ್ಲಿ 2 ಕೋ.ರೂ.ಗಳನ್ನು ಹೊಸ ತಳಿ ಅಭಿವೃದ್ಧಿ ಸಂಶೋಧನೆಗೆ ಮೀಸಲಿಡಬೇಕು. ಆ ಪ್ರಕ್ರಿಯೆ ನಿರ್ದಿಷ್ಟ ಕಾಲಾವಧಿಯಲ್ಲಿ ಪೂರ್ಣಗೊಳ್ಳಬೇಕು. ಉಳಿದ ಮೊತ್ತವನ್ನು ಹಳದಿ ರೋಗದಿಂದ ಸಂತ್ರಸ್ತರಾದವರಿಗೆ ಪರಿಹಾರ ರೂಪದಲ್ಲಿ ನೀಡಬೇಕು.
– ವಿಜಯ ಕುಮಾರ್ ಎಂ.ಡಿ., ಅಡಿಕೆ ಕೃಷಿಕ, ಮಡಪ್ಪಾಡಿ