ಹಾನಗಲ್ ನಲ್ಲಿ ಡಿಕೆಶಿ,ಸಿದ್ಧರಾಮಯ್ಯ ಜೇಬಿಗೆ ನೋಟು ಇಟ್ಟು ವೋಟ್ ಕೇಳಿದ್ರಾ?: ಈಶ್ವರಪ್ಪ
Team Udayavani, Nov 3, 2021, 4:10 PM IST
ಚಿತ್ರದುರ್ಗ: ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಜೀರೋನೋ ಹಿರೋನೋ ಅಂಥ ಗೊತ್ತಾಗಿದೆ. ಹಿಂದೆ ನಡೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಜೀರೋ, ಬಿಜೆಪಿ ಹೀರೋ ಎಂಬುದು ಜನರಿಗೆ ಗೊತ್ತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ಧಿಗಾರರೊಂದಿಗೆ ಮಾತಾನಾಡಿದ ಅವರು, ಇಂದಿರಾಗಾಂಧಿ ಕೈಯಲ್ಲೇ ಬಿಜೆಪಿಗೆ ಜೀರೋ ಮಾಡಲು ಆಗಿಲ್ಲ. ಈ ಜನ್ಮದಲ್ಲಿ ಬಿಜೆಪಿಯನ್ನು ಜೀರೋ ಮಾಡಲು ಆಗಲ್ಲ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಜೀರೋ ಎಂದ ಸಿದ್ಧರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.
ಹಾನಗಲ್ ನಲ್ಲಿ 7 ಸಾವಿರ ಲೀಡಲ್ಲಿ ಗೆದ್ದು ಕಾಂಗ್ರೆಸ್ ನವರು ಹಾರಾಡುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಿದರೂ ಸಿದ್ಧರಾಮಯ್ಯ ಅವರನ್ನು ಸೋಲಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷದಂತಾಗಿದೆ. ಜಾತಿ, ಧರ್ಮ ಹೆಸರೇಳಿ ಮಾಡಬಾರದ್ದನ್ನು ಮಾಡಿ ಒಂದು ಕಡೆ ಗೆಲುವು ದಾಖಲಿಸಿದ್ದೇ ಕಾಂಗ್ರೆಸ್ ನವರಿಗೆ ದೊಡ್ಡ ಸಾಧನೆಯಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಳುಗುವ ಹಡಗು ಎಂದವರಿಗೆ ಹಾನಗಲ್ ಗೆಲುವು ಉತ್ತರ : ಡಿ.ಕೆ.ಶಿವಕುಮಾರ್
ಹಾನಗಲ್ ಕ್ಷೇತ್ರದ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅವರು, ಹಾನಗಲ್ ನಲ್ಲಿ ಜನ ಶ್ರೀನಿವಾಸ್ ಮಾನೆ ಕೆಲಸ ನೋಡಿ ಜನ ಗೆಲ್ಲಿಸಿದ್ದಾರೆ ವಿನಃ ಕಾಂಗ್ರೆಸ್, ಡಿಕೆಶಿ, ಸಿದ್ಧರಾಮಯ್ಯಗೆ ಜನ ಮತ ನೀಡಿಲ್ಲ. ಹಾನಗಲ್ ನಲ್ಲಿ ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಲೀಂ, ಉಗ್ರಪ್ಪ ಮಾತಿನ ಬಗ್ಗೆ ಸಿದ್ಧರಾಮಯ್ಯ ಒಂದು ಮಾತು ಹೇಳಿಲ್ಲ.ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಮೊದಲು ಹೊರಬರಲಿ. ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಬೆಂಕಿ ಹೊತ್ತಿ ಉರಿಯುತ್ತಿದೆ. ಸಿದ್ಧರಾಮಯ್ಯ ಮೈಮೇಲೆ ಜ್ಞಾನವಿಲ್ಲದೆ ಮಾತಾಡುವ ವ್ಯಕ್ತಿ. ಸಿದ್ಧರಾಮಯ್ಯ ನಾಲಿಗೆಗೆ ಯಾವುದೇ ಬೆಲೆ ಇಲ್ಲ. ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರಿದ್ದಾರೆಂದು ಹೇಳಿದ್ದಕ್ಕೆ ಸಿದ್ಧರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಿಂದಗಿಯಲ್ಲಿ ಹಣದ ಹೊಳೆ ಹರಿಸಿ ಬಿಜೆಪಿ ಗೆಲುವು ಸಾಧಿಸಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾನಗಲ್ ನಲ್ಲಿ ಕಾಂಗ್ರೆಸ್ ನವರಿಗೆ ದುಡ್ಡು ಕೊಟ್ಟು ವೋಟ್ ಪಡೆದರಾ? ಡಿಕೆಶಿ, ಸಿದ್ಧರಾಮಯ್ಯ ಜೇಬಿಗೆ ನೋಟು ಇಟ್ಟು ಮತ ಪಡೆದರಾ? ಸಿಂದಗಿಯಲ್ಲಿ ಗೆಲ್ಲಲ್ಲು ಏನಾಗಿತ್ತು ನಿಮಗೆ ರೋಗ? ಎಂದು ಪ್ರಶ್ನಿಸಿದರು.