ಭಾರತಕ್ಕಿದೆ ಸದೃಢ ರಕ್ಷಣಾ ನೀತಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ
ಭಾರತವನ್ನು ಹಗುರವಾಗಿ ತಿಳಿದಿದ್ದ ಶತ್ರು ರಾಷ್ಟ್ರಗಳಿಗೀಗ ಭೀತಿ: ಶಾ
Team Udayavani, Dec 4, 2021, 9:30 PM IST
ನವದೆಹಲಿ: ಮೊದಲೆಲ್ಲಾ, ಕೇಂದ್ರ ಸರ್ಕಾರದ ರಕ್ಷಣಾ ನೀತಿಗಳು ವಿದೇಶಾಂಗ ನೀತಿಗಳ ನೆರಳಲ್ಲೇ ರೂಪಿತಗೊಳ್ಳುತ್ತಿದ್ದವು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ದೃಢವಾದಂಥ ರಕ್ಷಣಾ ನೀತಿಗಳು ಜಾರಿಗೊಂಡಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಮೊದಲೆಲ್ಲಾ ಯಾವುದೇ ದೇಶ ನಮ್ಮ ಮೇಲೆ ಆಕ್ರಮಣ ಮಾಡಿದರೂ, ಅದಕ್ಕೆ ಪ್ರತಿ ದಾಳಿಯನ್ನು ನಾವು ಮಾಡುತ್ತಲೇ ಇರಲಿಲ್ಲ. ಇದನ್ನು ದುರ್ಬಳಕೆ ಮಾಡಿಕೊಳ್ಳಲಾರಂಭಿಸಿದ ಕೆಲವು ರಾಷ್ಟ್ರಗಳು, ನಮ್ಮ ರಾಷ್ಟ್ರದೊಳಕ್ಕೆ ಬಂದು ನಮ್ಮ ಸೈನಿಕರನ್ನು ಕೊಂದು ಹೋಗುತ್ತಿದ್ದವು. ಈಗ ಭಾರತದ ಹೊಸ ರಕ್ಷಣಾ ನೀತಿಗಳಡಿ ಅವರ ಮೇಲೆ ನಾವು ದಾಳಿ ನಡೆಸಲಾರಂಭಿಸಿದ ನಂತರ ಅಂಥ ಘಟನೆಗಳು ಕಡಿಮೆಯಾಗಿವೆ” ಎಂದು ಹೇಳಿದ್ದಾರೆ.
ಇದೇ ವೇಳೆ, ಉತ್ತರ ಪ್ರದೇಶ ಚುನಾವಣೆಯ ಬಗ್ಗೆ ಮಾತನಾಡಿದ ಅವರು, “”ಯಾವುದೋ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡ ತಕ್ಷಣ ಅವುಗಳ ಮತವೂ ಸೇರಿಕೊಳ್ಳುತ್ತದೆ ಎನ್ನಲಾಗದು. ಉತ್ತರ ಪ್ರದೇಶದಲ್ಲಿ ನಾವು ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದೇವೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂನತೆಗಳನ್ನು ಸರಿಪಡಿಸಲಾಗಿದೆ
“ಭಾರತವು 2014ರಿಂದ ಸ್ಥಿರ ಸರ್ಕಾರವನ್ನು ಕಂಡಿದೆ. ಅದಕ್ಕೂ ಮೊದಲು ಸರ್ಕಾರದಲ್ಲಿ ನೀತಿಯಲ್ಲಿ ಸ್ಪಷ್ಟತೆಯಾಗಲಿ, ಸ್ಥಿರತೆಯಾಗಲಿ ಇರಲಿಲ್ಲ. ಎಲ್ಲ ಸಚಿವರೂ ತಮ್ಮನ್ನು ತಾವು ಪ್ರಧಾನಿ ಎಂದುಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನೆಲ್ಲ ಸರಿ ಮಾಡಿದ್ದಾರೆ. ಅವರ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಗಳಿಂದಾಗಿ ವಿದೇಶಿ ವಿನಿಮಯವು 473 ಬಿಲಿಯನ್. ರೂ.ಗಳಿಂದ 640 ಬಿಲಿಯನ್ ರೂ.ಗಳಿಗೆ ಏರಿದೆ’ ಎಂದಿದ್ದಾರೆ.
ಇದನ್ನೂ ಓದಿ : ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಕುರಿತಾಗಿಯೂ ಮಾತನಾಡಿದ ಅವರು, “ಸಂವಿಧಾನದ 370ನೇ ಕಲಂ ರದ್ದಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ರದ್ದಾದ ನಂತರ ಆ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಹೂಡಿಕೆಯೂ ಹೆಚ್ಚಿದೆ’ ಎಂದರು.