ಸೈನಿಕರ ಸೇವೆಗೆ ಗೌರವ : ಪೊಳಲಿ ಸರಕಾರಿ ಪ್ರೌಢ ಶಾಲೆಯಲ್ಲೊಂದು ವಿನೂತನ ಯೋಜನೆ
Team Udayavani, Jan 15, 2022, 12:57 PM IST
ಬಂಟ್ವಾಳ : ದೇಶದ ಸುರಕ್ಷತೆಗಾಗಿ ತಮ್ಮ ಬದುಕನ್ನು ಮುಡುಪಿಟ್ಟು ಹೋರಾಟ ಮಾಡುವ ಸೈನಿಕರ ಸೇವೆಗೆ, ಬದ್ಧತೆಗೆ ಗೌರವ ನೀಡುವ ವಿನೂತನ ಯೋಜನೆ ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಅನುಷ್ಠಾನದಲ್ಲಿದೆ.
ಇಲ್ಲಿ “ಯೋಧರಿಗಾಗಿ ನನ್ನದು ಕಾಣಿಕೆ’ ಎನ್ನುವ ಹೆಸರಿನಲ್ಲಿ ಹುಂಡಿಯೊಂದನ್ನು ಇರಿಸಲಾಗಿದ್ದು, ಮಕ್ಕಳು ತಮ್ಮಿಷ್ಟದಂತೆ ಹಣವನ್ನು ಹಾಕಬಹುದಾಗಿದೆ. ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರ ಸಲಹೆಯಂತೆ ಈ ಯೋಜನೆ ಜಾರಿ ಮಾಡಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
ಸೈನಿಕರ ನೆರವಿಗೆ ಅಳಿಲು ಸೇವೆ ನೀಡುವ ಜತೆಗೆ ಮಕ್ಕಳಲ್ಲಿ ಉಳಿತಾಯ ಹಾಗೂ ಸಹಕಾರ ಮನೋಭಾವ ಬೆಳೆಸುವ ಯೋಜನೆ ಇದಾಗಿದೆ ಎಂದು ಶಿಕ್ಷಕರು ಹೇಳಿದ್ದಾರೆ.