ತ್ಯಾಜ್ಯ ನಿರ್ವಹಣೆ: ಅನುಮೋದನೆ ಬಾಕಿ
ಉಳಿದ ಶೇ.20ರಲ್ಲಿ ಲೋಹ, ಗಾಜು ಇತರೆ ವಸ್ತುಗಳು ದೊರೆಯಲಿವೆ ಎಂದು ಅಂದಾಜಿಲಾಗಿದೆ.
Team Udayavani, Jan 28, 2022, 5:47 PM IST
ಹುಬ್ಬಳ್ಳಿ: ಮಹಾನಗರದ ಪರಿಸರ ಮಾಲಿನಕ್ಕೆ ಕಾರಣವಾಗಿರುವ ಕಸಮಡ್ಡಿಗಳ ಹಳೇ ತ್ಯಾಜ್ಯ ನಿರ್ವಹಣೆಗೆ ಕಾಲ ಕೂಡಿ ಬಂದಿದೆ. ಬೆಟ್ಟದಂತೆ ಬೆಳದಿರುವ ಹಳೆಯ ಕಸ ನಿರ್ವಹಣೆಗೆ ಪಾಲಿಕೆ ಸಿದ್ದಪಡಿಸಿದ್ದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿ ಪುರಸ್ಕರಿಸಿದೆ. ಸಚಿವ ಸಂಪುಟ ಅನುಮೋದನೆಯೊಂದೇ ಬಾಕಿ ಉಳಿದಿದ್ದು, ಒಂದು ವರ್ಷದೊಳಗೆ ಹಳೆಯ ತ್ಯಾಜ್ಯ ನಿರ್ವಹಣೆ ಮಾಡುವ ಅನಿವಾರ್ಯತೆ ಪಾಲಿಕೆ ಮುಂದಿದೆ.
ಹುಬ್ಬಳ್ಳಿ ಹಾಗೂ ಧಾರವಾಡದ ಕಸಮಡ್ಡಿಗಳಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದ ಘನ ತ್ಯಾಜ್ಯ ಸಂಗ್ರಹವಾಗಿ ಬೆಟ್ಟದ ರೂಪ ಪಡೆದಿವೆ. ಹಳೆಯ ತ್ಯಾಜ್ಯ ಅಗಿರುವುದರಿಂದ ರಾಸಾಯನಿಕ ಪ್ರಕ್ರಿಯೆಗಳಿಂದ ಆಗಾಗ ಬೆಂಕಿ ಹೊತ್ತಿ ಆರೋಗ್ಯಕ್ಕೆ ಮಾರಕವಾಗುವ ಹೊಗೆ ಸೂಸುತ್ತಿದೆ. ಕಸಮಡ್ಡಿಯ ಕೆಲ ಭಾಗದಲ್ಲಿ ಕಸ ಸುಟ್ಟು ಕೇವಲ ಮಣ್ಣು ಉಳಿದಿರುವುದು ಕಂಡು ಬರುತ್ತಿದೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗಂಭೀರವಾಗಿ ಪರಿಗಣಿಸಿದ್ದು, ಈ ಹಳೆಯ ತ್ಯಾಜ್ಯ ನಿರ್ವಹಣೆ ಮಾಡುವಂತೆ ಪಾಲಿಕೆಗೆ ಖಡಕ್ಕಾಗಿ ಎಚ್ಚರಿಕೆ ನೀಡಿದೆ. ಇದರ ಪರಿಣಾಮ ವಿಸ್ತೃತ ಯೋಜನೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು. ಘನ ತ್ಯಾಜ್ಯ ನಿರ್ವಹಣೆ ಕುರಿತಾದ ಯೋಜನೆಗಳನ್ನು ಪರಿಶೀಲಿಸುವ ರಾಜ್ಯಮಟ್ಟದ ಸಲಹಾ ಸಮಿತಿ ಯೋಜನಾ ವರದಿಯನ್ನು ಪುರಸ್ಕರಿಸಿದೆ. ಡಿಪಿಆರ್ ನಗರಾಭಿವೃದ್ಧಿ ಇಲಾಖೆಗೆ ಹೋಗಿದ್ದು, ಹಣಕಾಸು ಇಲಾಖೆಗೆ ಒಪ್ಪಿಗೆಗೆ ಮಂಡಿಸಲಾಗಿದೆ.
ಪಾಲಿಕೆಯೇ ಇದಕ್ಕೆ ತಗಲುವ ವೆಚ್ಚ ಭರಿಸುವ ಹಿನ್ನೆಲೆಯಲ್ಲಿ ಒಪ್ಪಿಗೆ ದೊರೆಯುವ ಎಲ್ಲಾ ಸಾಧ್ಯತೆಗಳಿದ್ದು, ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದರೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಪಾಲಿಕೆಯಿಂದ ಅನುದಾನ: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಪಾಲಿಕೆ ಈಗಾಗಲೇ ಸುಮಾರು 60 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಹೊಸ ಕಸ ನಿರ್ವಹಣೆಗೆ ಮುಂದಾಗಿದೆ. ಕಳೆದ ಮೂರ್ನಾಲ್ಕು ದಶಕ ದಿಂದ ಸಂಗ್ರಹವಾಗಿರುವ ಕಸ ನಿರ್ವಹಣೆಗೆ ಪಾಲಿಕೆಗೆ ದೊಡ್ಡ ಸವಾಲಾಗಿತ್ತು. ಹುಬ್ಬಳ್ಳಿ ಅಂಚಟಗೇರಿ ಕಸಮಡ್ಡಿಯಲ್ಲಿ ಸುಮಾರು 15 ಎಕರೆ ವಿಸ್ತೀರ್ಣದಲ್ಲಿ ಹಳೆಯ ತ್ಯಾಜ್ಯ ಸುಮಾರು 3.68 ಲಕ್ಷ ಟನ್, ಧಾರವಾಡದಲ್ಲಿ 12 ಎಕರೆ ಜಾಗದಲ್ಲಿ 1.2ಲಕ್ಷ ಟನ್ ಹಳೆಯ ತ್ಯಾಜ್ಯ ಸಂಗ್ರಹವಾಗಿದೆ. ಸಮರ್ಪಕ ನಿರ್ವಹಣೆ ಕೊರತೆಯಿಂದ ಎರಡೂ ಕಡೆ ತ್ಯಾಜ್ಯದ ಬೆಟ್ಟಗಳು ನಿರ್ಮಾಣವಾಗಿದೆ.
ಈ ಹಳೆಯ ಕಸ ನಿರ್ವಹಣೆಗಾಗಿ ಸುಮಾರು 35 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲಾಗಿದೆ. ಕೇಂದ್ರ ಸರಕಾರ ಸ್ವಚ್ಛ ಭಾರತ ಮಿಷನ್-2 ಯೋಜನೆಯಲ್ಲಿ ಶೇ.33 ಅನುದಾನ ನೀಡಲಿದೆ. ಉಳಿದ ವೆಚ್ಚವನ್ನು ಪಾಲಿಕೆಯೇ ಸ್ವಂತ ನಿಧಿಯಿಂದ ನಿರ್ವಹಿಸಲಿದೆ. ಹೀಗಾಗಿ ಸರಕಾರ ಇದಕ್ಕೆ ಅನುಮತಿ ನೀಡಲಿದೆ ಎನ್ನುವ ಸಂಪೂರ್ಣ ವಿಶ್ವಾಸ ಪಾಲಿಕೆ ಅಧಿಕಾರಿಗಳಲ್ಲಿದೆ.
ಪಾಲಿಕೆಗೆ 2023 ಗಡುವು: ದೆಹಲಿಯಂತಹ ನಗರದಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯ ಇತರೆ ನಗರಗಳಿಗೆ ವ್ಯಾಪಿಸದಂತೆ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಳೆಯ ತ್ಯಾಜ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ 2023 ಡೆಡ್ಲೈನ್ ನೀಡಿದ್ದು, ಅಷ್ಟರೊಳಗೆ ಈ ತ್ಯಾಜ್ಯದ ಬೆಟ್ಟಗಳನ್ನು ಕರಗಿಸಬೇಕು.
ಇಲ್ಲದಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇರುವ ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಈ ವರ್ಷದೊಳಗೆ ಕಾರ್ಯ ಆರಂಭಿಸಿ ಒಂದಿಷ್ಟು ಪ್ರಗತಿ ತೋರಿಸಿದರೆ ದಂಡದಿಂದ ಪಾರಾಗಬಹುದಾಗಿದೆ. ಹೀಗಾಗಿ ಶಥಾಯಗತಾಯ ಈ ವರ್ಷವೇ ಈ ಕೆಲಸ ಆರಂಭಿಸುವ ಚಿಂತನೆಯಲ್ಲಿ ಪಾಲಿಕೆಯಿದ್ದು, ಇದಕ್ಕೆ ಬೇಕಾದ ಸಿದ್ಧತೆಯನ್ನು ಕೂಡ ಮಾಡಿಕೊಂಡಿದೆ. ಧಾರವಾಡ ನಗರದ ಮಧ್ಯೆ ಹಳೆಯ ತ್ಯಾಜ್ಯ ಇರುವುದರಿಂದ ಮೊದಲ ಆದ್ಯತೆ ನೀಡಲಾಗುತ್ತಿದೆ. 15ನೇ ಹಣಕಾಸಿನಲ್ಲಿ ಶೇ.25 ಅನುದಾನ ಮೀಸಲಿಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚನೆಯಂತೆ ಒಂದಿಷ್ಟು ಅನುದಾನ ಕೂಡ ತೆಗೆದಿರಿಸಲಾಗಿದೆ.
ಪಾಲಿಕೆಗೆ ಒಂದಿಷ್ಟು ಆದಾಯ: ಡಿಪಿಆರ್ ಸಿದ್ಧಪಡಿಸುವ ಮುನ್ನ ಎರಡು ಕಸಮಡ್ಡಿಗಳಲ್ಲಿ ಪರೀಕ್ಷೆ ನಡೆಸಿದ್ದು, ಶೇ.60 ಮಣ್ಣು, ಶೇ.20 ಪ್ಲಾಸ್ಟಿಕ್, ಉಳಿದ ಶೇ.20ರಲ್ಲಿ ಲೋಹ, ಗಾಜು ಇತರೆ ವಸ್ತುಗಳು ದೊರೆಯಲಿವೆ ಎಂದು ಅಂದಾಜಿಲಾಗಿದೆ. ಮೂರ್ನಾಲ್ಕು ದಶಕ ಕಳೆದಿರುವ ಕಾರಣ ಇದರಲ್ಲಿ ದೊರೆಯುವ ಮಣ್ಣಿನಲ್ಲಿ ಕಾಂಪೋಸ್ಟ್ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಳೆಯ ಕಸವನ್ನು ಪ್ರೊಸೆಸಿಂಗ್ ಮಾಡುವ ಕಂಪನಿಗಳಿದ್ದು, ಯಂತ್ರ, ಸಿಬ್ಬಂದಿ ಸೇರಿ ಎಲ್ಲವನ್ನೂ ಅವರಿಗೆ ಗುತ್ತಿಗೆ ಕೊಡುವ ಚರ್ಚೆ ಪಾಲಿಕೆಯಲ್ಲಿದೆ.
ಹೊಸದಾಗಿ ಯಂತ್ರ ಖರೀದಿ, ಪಾಲಿಕೆಯಿಂದಲೇ ಸಿಬ್ಬಂದಿ ನಿಯೋಜಿಸಿ ನಿರ್ವಹಿಸುವುದು ವೆಚ್ಚದಾಯಕವಾಗಿದ್ದು, ಖಾಸಗಿ ಕಂಪನಿಗೆ ನೀಡುವುದೇ ಉತ್ತಮ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಈ ತ್ಯಾಜ್ಯವನ್ನು ಸಂಪೂರ್ಣ ಪ್ರೊಸೆಸಿಂಗ್ ಮಾಡಿದರೆ ಸ್ವತ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಮಹಾನಗರದ ರ್ಯಾಂಕಿಂಗ್ ಉತ್ತಮವಾಗುತ್ತದೆ.
ಹಳೆಯ ತ್ಯಾಜ್ಯ ನಿರ್ವಹಣೆಯ ನಗರಗಳ ಪೈಕಿ ಉತ್ತಮ ಸ್ಥಾನ ಲಭಿಸಲಿದೆ. ಹಳೆಯ ತ್ಯಾಜ್ಯ ಸಂಪೂರ್ಣ ಪ್ರೊಸೆಸಿಂಗ್ ಮಾಡುವುದರಿಂದ ಸಾಕಷ್ಟು ಭೂಮಿ ದೊರೆಯಲಿದೆ. ಈ ಜಾಗವನ್ನು ಕನಿಷ್ಠ 15 ವರ್ಷಗಳ ಕಾಲ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲದ ಕಾರಣ ಪಾಲಿಕೆ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಿಗೆ ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲಕಿಂತಲೂ ಪ್ರಮುಖವಾಗಿ ಕೊಳೆತ ಕಸ ಹಾಗೂ ಪ್ಲಾಸ್ಟಿಕ್ನಿಂದಾಗಿ ಬೆಂಕಿ ಹತ್ತಿಕೊಂಡು ದೊಡ್ಡ ಮಟ್ಟದಲ್ಲಿ ಪರಿಸರ ಮಾಲಿನ್ಯ ಆಗುವುದು ತಪ್ಪಲಿದೆ.
ಪಾಲಿಕೆ ಸಲ್ಲಿಸಿದ್ದ ಡಿಪಿಆರ್ನ್ನು ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿ ಕೂಲಂಕುಷವಾಗಿ ಪರಿಶೀಲಿಸಿ ಒಪ್ಪಿಗೆ ಸೂಚಿಸಿದೆ. ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಬೇಕಿದ್ದು, ಇದು ದೊರೆಯುವ ಸಂಪೂರ್ಣ ವಿಶ್ವಾಸವಿದೆ. ಈ ಕಾರ್ಯಕ್ಕೆ ಒಂದಿಷ್ಟು ಅನುದಾನ ಸೇರಿದಂತೆ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಹಳೆಯ ತ್ಯಾಜ್ಯ ನಿರ್ವಹಿಸಿ ಆ ಪ್ರದೇಶದಲ್ಲಿ ಸುಂದರ ವಾತಾವರಣ ಸೃಷ್ಟಿಯಾಗಲಿದೆ.
ಡಾ|ಬಿ.ಗೋಪಾಲಕೃಷ್ಣ,
ಆಯುಕ್ತ, ಮಹಾನಗರ ಪಾಲಿಕೆ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ