ಸವದತ್ತಿ ಯಲ್ಲಮ್ಮ ಸೇರಿ ಬೆಳಗಾವಿಯ 9 ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಮುಕ್ತ
Team Udayavani, Jan 31, 2022, 5:26 PM IST
ಬೆಳಗಾವಿ: ಏಳುಕೊಳ್ಳದ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿ ಜಿಲ್ಲೆಯ 9 ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಮುಕ್ತ ಅವಕಾಶ ನೀಡಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ 9 ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನ ಭಾಗ್ಯ ನಿಷೇಧಿಸಲಾಗಿತ್ತು. ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿಯ ಶ್ರೀ ಜೋಗುಳಬಾವಿ ಸತ್ತೆಮ್ಮ ದೇವಸ್ಥಾನ, ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ರಾಯಬಾಗ ತಾಲೂಕಿನ ಚಿಂಚಲಿಯ ಶ್ರೀ ಮಾಯಕ್ಕಾ ದೇವಸ್ಥಾನ, ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿಯ ಶ್ರೀ ದತ್ತ ಮಹಾರಾಜ ದೇವಸ್ಥಾನ, ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಮ್ಮ ಮಂದಿರ, ಕಾಗವಾಡ ತಾಲೂಕಿನ ಮಂಗಸೂಳಿಯ ಶ್ರೀ ಮಲ್ಲಯ್ಯ ಮಂದಿರ, ಅಥಣಿ ತಾಲೂಕಿನ ಖಿಳೇಗಾಂವ ಶ್ರೀ ಬಸವೇಶ್ವರ ದೇವಸ್ಥಾನ, ಅಥಣಿ ತಾಲೂಕಿನ ಕೊಕಟನೂರ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ವಿಧಿಸಲಾಗಿದ್ದ ಎಲ್ಲ ನಿರ್ಬಂಧವನ್ನು ಸರ್ಕಾರ ಸಡಿಲಿಸಿದ್ದು, ಎಲ್ಲ ðಧಾರ್ಮಿಕ ಕೇಂದ್ರಗಳಲ್ಲಿ ಜರುಗಬಹುದಾದ ವಿಶೇಷ ಉತ್ಸವ ಹಾಗೂ ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿಸಿದ್ದ ನಿರ್ಬಂಧ ಮುಂದುವರಿಸಲಾಗಿದೆ. ಕೇವಲ ದರ್ಶನ ಮತ್ತು ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆದ 50 ಜನರ ಒಗ್ಗೂಡುವಿಕೆಯನ್ನು ಮೀರದಂತೆ ಅವಕಾಶ ಕಲ್ಪಿಸಲು ಆದೇಶಿಸಲಾಗಿದೆ.