ಉಳ್ಳಾಲ: ಅಗ್ನಿಶಾಮಕ ಠಾಣೆಗೆ ಜಮೀನು ಕಾದಿರಿಸಲಾಗಿದೆ
Team Udayavani, Feb 16, 2022, 5:15 AM IST
ಬೆಂಗಳೂರು: ಉಳ್ಳಾಲ ತಾಲೂಕು ವ್ಯಾಪ್ತಿಯ ಪಜೀರು/ಕೈರಂಗಳ ಕೈಗಾರಿಕಾ ಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಕೆಐಎಡಿಬಿಯಿಂದ 2.50 ಎಕ್ರೆ ಜಮೀನು ಎರಡು ವರ್ಷಗಳ ವರೆಗೆ ಲೀಸ್ಗೆ ಪಡೆದು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ನ ಯು.ಟಿ. ಖಾದರ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಸೇಫ್-2 ಯೋಜನೆ ಯಡಿ ಪಜೀರು ಕೈರಂಗಳದಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ ಮಾಡಲು ಅನುದಾನ ನಿಗದಿಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಕಾರ್ಮಿಕರ ನೋಂದಣಿಯಲ್ಲಿ ಅಕ್ರಮ ಪತ್ತೆ- ಹೆಬ್ಟಾರ್
ಇದಕ್ಕೂ ಮುನ್ನ ಮಾತನಾಡಿದ ಯು.ಟಿ. ಖಾದರ್, ಉಳ್ಳಾಲ ಕ್ಷೇತ್ರದಲ್ಲಿ 4 ವೈದ್ಯಕೀಯ, 3 ಎಂಜಿನಿಯರಿಂಗ್ ಕಾಲೇಜು ಇದ್ದು, 2 ಕೈಗಾರಿಕೆ ಪ್ರದೇಶ ಸೇರಿ ಸಾಕಷ್ಟು ವಾಣಿಜ್ಯ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿ ಆದಷ್ಟು ಬೇಗ ಅಗ್ನಿಶಾಮಕ ಠಾಣೆ ಅಗತ್ಯವಿದೆ. ಸಂಸ್ಥೆಗಳು ಕಟ್ಟಡ ಕಟ್ಟಿಕೊಡಲು ಸಿದ್ಧ ಇವೆ. ಮೊದಲು ಸಿಬಂದಿ ನೇಮಕಕ್ಕೆ ಚಾಲನೆ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ವಸ್ತ್ರಸಂಹಿತೆ ವಿಚಾರದಲ್ಲಿ ಕಾಲೇಜುಗಳಲ್ಲಿ ನಿಯಮ ಪಾಲಿಸಲು ಹೈಕೋರ್ಟ್ ಮಧ್ಯಾಂತರ ಆದೇಶ ನೀಡಿದ್ದರೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲೂ ಒತ್ತಡ ಹಾಕಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ.
- ಯು.ಟಿ. ಖಾದರ್ ,
ವಿಧಾನಸಭೆ ವಿಪಕ್ಷ ಉಪ ನಾಯಕ