ದಿಶಾ ಸಾಲ್ಯಾನ್ ವಿರುದ್ಧದ ಹೇಳಿಕೆ: ಕೇಂದ್ರ ಸಚಿವ ರಾಣೆ ನಾಳೆ ಪೊಲೀಸ್ ಠಾಣೆಗೆ
Team Udayavani, Mar 4, 2022, 9:15 PM IST
ಮುಂಬಯಿ: ಸಾವಿಗೀಡಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿರುವ ಆರೋಪದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಅವರ ಪುತ್ರ, ಶಾಸಕ ನಿತೇಶ್ ರಾಣೆ ಅವರು ಶನಿವಾರ ಮಾಲ್ವಾಣಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಒಳಗಾಗಲಿದ್ದಾರೆ.
ತನ್ನ ಮಗಳ ಸಾವಿನ ಬಗ್ಗೆ ಕೇಂದ್ರ ಸಚಿವರು ಹಾಗೂ ಅವರ ಪುತ್ರ ಮಾನಹಾನಿಕರ ಹಾಗೂ ತಪ್ಪು ಮಾಹಿತಿಯನ್ನು ಹರಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಿಶಾ ಸಾಲ್ಯಾನ್ ಅವರ ತಾಯಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಫೆ. 27ರಂದು ಈ ಇಬ್ಬರು ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರನ್ವಯ ಪ್ರಕರಣ ದಾಖಲಾಗಿತ್ತು.