ಈಶ್ವರಪ್ಪ ಒಬ್ಬ ದೇಶದ್ರೋಹಿ,ರಾಷ್ಟ್ರಧ್ವಜ ದ್ರೋಹಿ; ಅವರಿಗೆಲ್ಲಾ ಪ್ರತಿಕ್ರಿಯಿಸಲ್ಲ: ಡಿಕೆಶಿ
Team Udayavani, Apr 5, 2022, 2:05 PM IST
ಚಿತ್ರದುರ್ಗ: ಹಿಜಾಬ್ ಬಗ್ಗೆ ಕಾಂಗ್ರೆಸ್ ನಾಯಕರು ಗಡಸುತನದಿಂದ ಮಾತಾನಾಡುತ್ತಿಲ್ಲ. ಬಿಜೆಪಿ ದೇಶದಲ್ಲಿ ಅಶಾಂತಿ ಮೂಡಿಸಲು ಟ್ರ್ಯಾಪ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಮಾತಾನಾಡಿದ ಅವರು, ಹಿಜಾಬ್ ಬಗ್ಗೆ ನಾಯಕರಿಗೆ ಕೊಟ್ಟ ಸೂಚನೆಗೆ ಗೃಹ ಸಚಿವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಭಾವನಾತ್ಮಕವಾಗಿ ತೆಗೆದುಕೊಂಡು ಮಾತಾಡದಂತೆ ಸೂಚಿಸಿದ್ದೇನೆ. ಯಾರು ಮಾತಾಡಬೇಕು ಅವರೇ ಮಾತಾಡಬೇಕು. ಎಲ್ಲರೂ ಪ್ರತಿಕ್ರಿಯಿಸಬಾರದೆಂದು ಸೂಚನೆ ನೀಡಿದ್ದು ನಿಜ ಎಂದು ಸ್ಪಷ್ಟನೆ ನೀಡಿದರು.
ನಾವು ಯಾವ ಸಿಂಹಾಸನ ಇಟ್ಟುಕೊಂಡಿಲ್ಲ, ಪ್ರಜಾಪ್ರಭುತ್ವ ಪಾಲಿಸುತ್ತೇವೆ. ಕಾಂಗ್ರೆಸ್ ಪಕ್ಷದ ಜವಬ್ದಾರಿ ಸ್ಥಾನ ನಿರ್ವಹಿಸುತ್ತಿದ್ದೇವೆ ಎಂದರು.
ಮುಸ್ಲಿಮರನ್ನು ಓಲೈಸಲು ಡಿಕೆಶಿ ಸಂವಿಧಾನ ಮೀರಿ ಮಾತನಾಡ್ತಿದ್ದಾರೆಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈಶ್ವರಪ್ಪ ದೇಶದ್ರೋಹಿ, ರಾಷ್ಟ್ರಧ್ವಜ ದ್ರೋಹಿ, ಸಂವಿಧಾನ ದ್ರೋಹಿ ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ. ಸಿಎಂ ಮಾತಿಗೆ ಉತ್ತರ ಕೊಡಬಹುದು, ರಸ್ತೇಲಿ ಹೋಗೋರಿಗೆಲ್ಲ ಉತ್ತರಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇವರೆಲ್ಲ ಮುಸಲ್ಮಾನರನ್ನು ತೃಪ್ತಿಪಡಿಸಲು ಸಂವಿಧಾನ ಮೀರಿ ಹೇಳಿಕೆ ಕೊಡುತ್ತಿದ್ದಾರೆ: ಈಶ್ವರಪ್ಪ
ಹಿರಿಯೂರಲ್ಲಿ ಫ್ಲೆಕ್ಸ್ ವಿಚಾರಕ್ಕೆ ಕೈ ಕಾರ್ಯಕರ್ತರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಚಾರ ವಿಚಾರ ಪ್ರಚಾರಕ್ಕೆ ಪೈಪೋಟಿ ಇದೆ ಅಂದರೆ ಅಭಿನಂದನೆ. ಸ್ಪರ್ಧೆ ಇರಬೇಕು ಎಂದು ಕಾರ್ಯಕರ್ತರ ಗಲಭೆಯನ್ನು ಸಮರ್ಥನೆ ಮಾಡಿಕೊಂಡರು.
ಅಜಾನ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಜಾನ್ ಇಂದು ನಿನ್ನೆಯ ವಿಚಾರ ಅಲ್ಲ, ಧರ್ಮದ ವಿಚಾರ ಅಲ್ಲ. ಬೆಳಗ್ಗೆ ಪ್ರಾರ್ಥನೆಗಾಗಿ ಒಂದು ಇತಿಮಿತಿಯಲ್ಲಿ ಒಂದು ಕೂಗು. ಇಡೀ ಪ್ರಪಂಚದಲ್ಲಿ ಅಜಾನ್ ಬಗ್ಗೆ ದೊಡ್ಡ ಚರ್ಚೆ ಆಗಿದೆ. ನಾವು ನೀವು ಚರ್ಚೆ ಮಾಡುವ ಅಗತ್ಯ ಇಲ್ಲ ಕಾನೂನು, ಸಂವಿಧಾನ ಇದೆ. ಪದ್ಧತಿ ಉಳಿಸಿಕೊಂಡು ಹೋಗಬೇಕಿದೆ ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.75 ತುಟ್ಟಿಭತ್ಯೆ ಹೆಚ್ಚಳ : ಜನವರಿಯಿಂದಲೇ ಪೂರ್ವಾನ್ವಯ
ಅಲಾರಾಮ್ ಇಟ್ಟುಕೊಂಡು ಎಚ್ಚರಗೊಳ್ಳಲಿ ಎಂದ ಸಿ.ಟಿ.ರವಿಗೆ ಹೇಳಿಕೆ ಉತ್ತರಿಸಿದ ಅವರು, ಪ್ರಧಾನಿ,ಗೃಹ ಸಚಿವರಿಗೆ ಅವರು ಈ ಬಗ್ಗೆ ಕೇಳಲಿ. ಕಾನೂನು ಇದ್ದರೆ ಬೇಕಿದ್ದರೆ ಜಡ್ಜ್ ಮೆಂಟ್ ಮಾಡಿಸಲು ಹೇಳಿ ಎಂದು ಟಾಂಗ್ ಕೊಟ್ಟರು.