“ಸಿಪಾಯಿ ದಂಗೆಗೆ ಮುನ್ನ ಅಮರ ಸುಳ್ಯ ಸಮರ’
ಬಾವುಟಗುಡ್ಡೆ: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಭೂಮಿಪೂಜೆ
Team Udayavani, Apr 6, 2022, 5:40 AM IST
ಮಂಗಳೂರು: ದೇಶದಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ ಸಂಗ್ರಾಮ 1857ರ ಸಿಪಾಯಿ ದಂಗೆಯಾದರೂ ಅದಕ್ಕೂ ಮೊದಲೇ 1837ರಲ್ಲಿ ದ.ಕ. ಜಿಲ್ಲೆಯ ಸುಳ್ಯದಲ್ಲಿ ರೈತರೇ ಬ್ರಿಟಿಷರ ವಿರುದ್ಧ ದಂಗೆ ಎದ್ದಿರುವ ಬಗ್ಗೆ ದಾಖಲೆ ಇದೆ. ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಈ ಮಹತ್ವದ ಅಂಶವನ್ನು ದೇಶಕ್ಕೆ ತಿಳಿಸುವ ಕಾರ್ಯ ನಡೆಸಬೇಕು ಎಂದು ಮಾಜಿ ಸಿಎಂ, ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
1837ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಹುತಾತ್ಮ ರಾದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆ ಹಿನ್ನೆಲೆಯಲ್ಲಿ ಬಾವುಟ ಗುಡ್ಡೆ ಠಾಗೋರ್ ಉದ್ಯಾನವನದಲ್ಲಿ ಮಂಗಳ ವಾರ ಭೂಮಿಪೂಜೆ ನೆರವೇ ರಿಸಿ ಅವರು ಮಾತನಾಡಿದರು.
1837ರಲ್ಲಿ ದ.ಕ. ಜಿಲ್ಲೆಯ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ ಅಮರ ಸುಳ್ಯ ಸಮರವೆಂದೇ ಜನ ಜನಿತವಾಗಿದೆ. ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ನಿರ್ಮಿಸುವ ಮೂಲಕ ದೇಶಭಕ್ತರಿಗೆ ಇದು ಮಹತ್ವದ ಸ್ಥಳವಾಗಲಿದೆ ಎಂದರು.
ಹೋರಾಟದ ದಾಖಲೀಕರಣ ಕೇಂದ್ರಕ್ಕೆ: ಶಾಸಕ ಕಾಮತ್
ಕೆದಂಬಾಡಿ ರಾಮಯ್ಯ ಗೌಡರ ಸ್ವಾತಂತ್ರ್ಯ ಹೋರಾಟದ ಸ್ಮಾರಕ ವನ್ನು ಆಕರ್ಷಕವಾಗಿ ನಿರ್ಮಿಸಲಾಗು ವುದು. ಅವರ ಹೋರಾಟವನ್ನು ದಾಖಲೀಕರಣ ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರು ವಿ.ವಿ. ನಿವೃತ್ತ ಉಪ ಕುಲಸಚಿವ ಡಾ| ಪ್ರಭಾಕರ ನೀರುಮಾರ್ಗ ಉಪನ್ಯಾಸ ನೀಡಿದರು. ವಿದ್ಯಾಧರ ಕೊಡಕ್ಕಲ್, ಅರವಿಂದ ಚೊಕ್ಕಾಡಿ ಹಾಗೂ ಉಸ್ತು ವಾರಿ ಸಮಿತಿಯಿಂದ ಹೊರತಂದ ಪುಸ್ತಕ ಬಿಡುಗಡೆ ಮಾಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಎಸ್. ಅಂಗಾರ, ಶಾಸಕರಾದ ಡಾ| ಭರತ್ ಶೆಟ್ಟಿ, ಸಂಜೀವ ಮಠಂದೂರು, ವಿ. ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಪಾಲಿಕೆ ಸ್ಥಳೀಯ ಸದಸ್ಯ ಎ.ಸಿ.ವಿನಯರಾಜ್, ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೋಕೇಶ್, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ರಾಜೇಶ್ ಜಿ. ಉಪಸ್ಥಿತರಿದ್ದರು. ಕಿರಣ್ ಬುಡ್ಲೆಗುತ್ತು ಸ್ವಾಗತಿಸಿದರು. ರಕ್ಷಿತ್ ಪುತ್ತಿಲ ವಂದಿಸಿದರು. ಸದಾಶಿವ ಆಳ್ವ ನಿರೂಪಿಸಿದರು.
ಬಂಗ್ಲೆಗುಡ್ಡೆ ಸ್ಮಾರಕ: ಸಚಿವ ಅಂಗಾರ
1837ರ ಪ್ರಥಮ ಸ್ವಾತಂತ್ರ್ಯ ಹೋರಾಟದ ನೆನಪಿನಲ್ಲಿ ಸುಳ್ಯದ ಬೆಳ್ಳಾರೆಯ ಬಂಗ್ಲೆಗುಡ್ಡೆಯ ಬ್ರಿಟಿಷರ ಕೋಶಾಗಾರವನ್ನು ಸ್ಮಾರಕವಾಗಿ ಕಾಪಿಡಲಾಗುವುದು. ಉಬರಡ್ಕ ಅಮೈ ಮಡಿಯಾರು ಶಾಲೆಯನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಸ್. ಅಂಗಾರ ಹೇಳಿದರು.
ವಿ.ವಿ.ಯಲ್ಲಿ ಅಧ್ಯಯನ ಪೀಠ
1837ರ ಆಸುಪಾಸಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವರವಾದ ಅಧ್ಯಯನ ನಡೆಯಬೇಕಿದೆ. ಇದಕ್ಕಾಗಿ ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಕೆದಂಬಾಡಿ ರಾಮಯ್ಯ ಗೌಡರ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಗೆ ರಾಜ್ಯ ಸರಕಾರ ಅನುಮತಿ ನೀಡಿರುವುದು ಶ್ಲಾಘನೀಯ. ಕೆದಂಬಾಡಿ ರಾಮಯ್ಯ ಗೌಡರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ದಾಖಲೆ ಸಹಿತ ಡಾಕ್ಯುಮೆಂಟರಿ ಮಾಡಿದರೆ ಅದನ್ನು ಕೇಂದ್ರ ಸರಕಾರ ಹಾಗೂ ಪ್ರಧಾನಿ ಯವರ ಗಮನಕ್ಕೆ ತರಲಾಗುವುದು ಎಂದು ಸದಾನಂದ ಗೌಡ ಹೇಳಿದರು.