ಬಿಜೆಪಿ ಚುನಾವಣಾ ರಣತಂತ್ರ: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ
Team Udayavani, May 14, 2022, 4:36 PM IST
ಅಗರ್ತಲಾ : ಅನಿರೀಕ್ಷಿತ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿ ನಾಯಕ ಬಿಪ್ಲಬ್ ಕುಮಾರ್ ದೇಬ್ ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. 50 ರ ಹರೆಯದ ನಾಯಕ ದೇಬ್ ಅವರು ಶುಕ್ರವಾರ ದೆಹಲಿ ಪ್ರವಾಸಕ್ಕೆ ತೆರಳಿ ಶನಿವಾರ ಬೆಳಿಗ್ಗೆ ಅಗರ್ತಲಾಗೆ ಮರಳಿದ್ದರು.
“ಸುದ್ದಿಯನ್ನು ನಾವು ಆಶ್ಚರ್ಯದಿಂದ ಸ್ವೀಕರಿಸಿದ್ದೇವೆ. ಅವರಿಗೆ ಏನು ಪ್ರೇರೇಪಿಸಿತು ಎಂದು ತಿಳಿದಿಲ್ಲ. ಆದರೆ ನಿಸ್ಸಂಶಯವಾಗಿ ಅವರು ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಚರ್ಚೆ ನಡೆಸಿದ್ದಾರೆ. ಪಕ್ಷವು ಕೆಲವು ಯೋಜನೆಗಳನ್ನು ಹೊಂದಿರಬಹುದು ಮತ್ತು ಅದು ಪಕ್ಷಕ್ಕೆ ಒಳ್ಳೆಯದು ಎಂದು ನಮಗೆ ವಿಶ್ವಾಸವಿದೆ, ”ಎಂದು ದೇಬ್ ಅವರ ಸಂಪುಟದ ಸಚಿವರೊಬ್ಬರು ಹೇಳಿದ್ದಾರೆ.
2023 ರಲ್ಲಿ ತ್ರಿಪುರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ರಣತಂತ್ರ ರೂಪಿಸಿ ನಾಯಕತ್ವ ಬದಲಾವಣೆ ಮಾಡಿದೆ ಎನ್ನಲಾಗಿದೆ. ಇಂದು ಶನಿವಾರ ಸಂಜೆ ತ್ರಿಪುರಾ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.