20ರಂದು ಮಾನ್ವಿ ಬಂದ್ಗೆ ಕರೆ
Team Udayavani, May 16, 2022, 2:38 PM IST
ಮಾನ್ವಿ: ರಾಜ್ಯದಲ್ಲಿನ ಸಮಿಶ್ರ ಸರಕಾರದ ಅವಧಿಯಲ್ಲಿ ರಚಿಸಿದ ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯ ಆಯೋಗವು ನೀಡಿದ ವರದಿಯನ್ನು ಜಾರಿ ಮಾಡಲು ಆಗ್ರಹಿಸಿ ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದರ ಅಂಗವಾಗಿ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಮೇ 20ರಂದು ಮಾನ್ವಿ ಬಂದ್ಗೆ ಕರೆ ನೀಡಲಾಗಿದೆ ಎಂದು ತಿಪ್ಪಣ್ಣ ಬಗಲವಾಡ ವಕೀಲರು ತಿಳಿಸಿದರು.
ಪಟ್ಟಣದಲ್ಲಿ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ತಾ.ಘಟಕ ವತಿಯಿಂದ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮಿಗಳು ಮೀಸಲಾತಿ ಹೆಚ್ಚಿಸುವಂತೆ ಧರಣಿ ನಡೆಸುತ್ತಿದ್ದರು ಕೂಡ ರಾಜ್ಯ ಸರಕಾರ ಸ್ಪಂದನೆ ತೋರದೆ ಇರುವುದನ್ನು ಪ್ರತಿಭಟಿಸಿ ಮೇ 20ರಂದು ಬೆಳಗ್ಗೆ ಪಟ್ಟಣದ ವಾಲ್ಮೀಕಿ ವೃತ್ತ ಹಾಗೂ ಡಾ| ಅಂಬೇಡ್ಕರ್ ವೃತ್ತಗಳಲ್ಲಿನ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಸವ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಆದ್ದರಿಂದ ಸಾರ್ವಜನಿಕರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಮಾನ್ವಿ ಬಂದ್ಗೆ ಸಹಕಾರ ನೀಡುವಂತೆ ಕೋರಿದರು.
ವಾಲ್ಮೀಕಿ ಸಮಾಜದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಬುಡ್ಡಪ್ಪ ನಾಯಕ, ಮಾದಿಗ ಮಹಾಸಭಾದ ರಾಜ್ಯ ಕಾರ್ಯದರ್ಶಿ ಪ್ರಭುರಾಜ್ ಕೊಡ್ಲಿ ಮಾತನಾಡಿದರು. ಶಿವರಾಜ ಉಮಳಿ ಹೊಸೂರು, ಪಿ.ರವಿಕುಮಾರ, ಶರಣಯ್ಯ ನಾಯಕ, ಕೆ.ವೈ. ಬಸವರಾಜ, ರಾಮಣ್ಣ ನಾಯಕ, ಶರಣಬಸವ ನಾಯಕ ಜಾನೆಕಲ್, ಹನುಮೇಶ ನಾಯಕ, ಮೌನೇಶ ನಾಯಕ ಸೇರಿದಂತೆ ಇನ್ನಿತರರು ಇದ್ದರು.