ಮೇ 27ರಿಂದ ಮಾವು, ಹಲಸು ಮೇಳ; 50ಕ್ಕೂ ಹೆಚ್ಚು ವಿವಿಧ ತಳಿಯ ಮಾವು ಪ್ರದರ್ಶನ
ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
Team Udayavani, May 26, 2022, 5:58 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲ ಆಗುವಂತೆ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ “ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 27ರಿಂದ 29 ರವರೆಗೆ ಪಟ್ಟಣದ ರಾಣಿ ಸರ್ಕಲ್ ಸಮೀಪದ ನಂದಿ ಉಪಚಾರ ಹೋಟೆಲ್ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ಬೆಂ.ಗ್ರಾ.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರೇವಣಪ್ಪ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿಯಲ್ಲಿ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾವು ಮತ್ತು ಹಲಸು ಒಂದು ಋತುಮಾನ ಆಧಾರಿತ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಮಾವು ಮತ್ತು ಹಲಸು ಬೆಳೆ ಕಟಾವಿಗೆ ಬಂದಿದೆ. ಮಾವು ಹಾಗೂ ಹಲಸು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುವಂತೆ ಮಾಡಲು ಈ ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ 50ಕ್ಕೂ ಹೆಚ್ಚು ವಿವಿಧ ಮಾವು ತಳಿಗಳ ಪ್ರದರ್ಶನ ಮತ್ತು 10ಕ್ಕೂ ಹೆಚ್ಚು ವಿವಿಧ ಮಾವಿನ ತಳಿಗಳ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮೇಳದಲ್ಲಿ ಸಸ್ಯ ಸಂತೆ: ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳು ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಮೇಳದಲ್ಲಿ ಮಾವು, ಹಲಸು, ಚಕೋತ, ದಾಳಿಂಬೆ, ದ್ರಾಕ್ಷಿ ಮಳಿಗೆ ಸೇರಿದಂತೆ 20 ರಿಂದ 25 ಮಳಿಗೆ ತೆರೆಯಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೇಳದಲ್ಲಿ ಸಸ್ಯ ಸಂತೆಯೆಂಬ ಕಾರ್ಯಕ್ರಮ ಏರ್ಪಡಿಸಿದೆ ಎಂದರು.
ಅಲಂಕಾರಿಕ ಗಿಡ ಮಾರಾಟ: ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ, ಸಸಿ ಗಿಡಗಳನ್ನು, ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸಸ್ಯ ಸಂತೆಯಲ್ಲಿ ಮಾವು, ಸೀಬೆ, ತೆಂಗು, ನೇರಳೆ ಇತ್ಯಾದಿ ಹಾಗೂ ಅಲಂಕಾರಿಕ ಗಿಡ ಮಾರಾಟ ಮಾಡಲಾಗುವುದು ಎಂದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ, ದೇವನಹಳ್ಳಿ ತಾಲೂಕು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ, ಸಹಾಯಕ ನಿರ್ದೇಶಕ ಉಮಾಪತಿ ಹಾಗೂ ಹಿರಿಯ ಸಹಾಯಕ ನಿರ್ದೇಶಕರು ಇದ್ದರು.
ಹಾಪ್ಕಾಮ್ಸ್ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ
ಜಿಲೆಯಲ್ಲಿ ಮಾವು ಬೆಳೆಯನ್ನು 7,586.94 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಪ್ರಮುಖವಾಗಿ ಬಾದಾಮಿ ರಸಪುರಿ, ತೋತಾಪುರಿ ಮಲ್ಲಿಕಾ, ಸೇಂದೂರು ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದೆ. ಹಲಸು ಬೆಳೆಯನ್ನು 69.52 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಮೇಳದಲ್ಲಿ ಹಾಪ್ಕಾಮ್ಸ್ ದರಕ್ಕಿಂತ ಕಡಿಮೆ ದರದಲ್ಲಿ ಗ್ರಾಹಕರು ಹಣ್ಣು ಕೊಳ್ಳಬಹುದಾಗಿದೆ ಎಂದು ಜಿಪಂ ಸಿಇಒ ಕೆ. ರೇವಣಪ್ಪ ಹೇಳಿದರು.
ಆರೋಗ್ಯ ಸಚಿವರಿಂದ ಮಾವು ಮೇಳ ಉದ್ಘಾಟನೆ
ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವ ಂಟಿಬಿ ನಾಗರಾಜು, ತೋಟಗಾರಿಕೆ ಸಚಿವ ಎನ್. ಮುನಿರತ್ನ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದು, ಶಾಸಕ ಎಲ್.ಎನ್. ನಾರಾಯಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ಎನ್.ಬಚ್ಚೇಗೌಡ, ಎ.ರವಿ, ಶಾಸಕ ಟಿ.ವೆಂಕಟರಮಣಯ್ಯ, ಡಾ.ಕೆ. ಶ್ರೀನಿವಾಸಮೂರ್ತಿ, ಶರತ್ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಅ.ದೇವೇಗೌಡ, ಎಸ್.ರವಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಜಿಪಂ ಆಡಳಿತಾಧಿಕಾರಿ ಕೆ.ಪಿ. ಮೋಹನ್ರಾಜ್, ತೋಟಗಾರಿಕೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್, ಕೆ.ವಿ.ನಾಗರಾಜು, ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ರವಿಕುಮಾರ್.ಆರ್., ಎಲ್ಲಾ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲೆಯ ನಗರಸಭೆ, ಪುರಸಭೆ, ಪಪಂ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಲ್ಲಾ ಚುನಾಯಿತ ಪ್ರತಿನಿಧಿಗಳು, ಎಲ್ಲಾ ನಾಮ ನಿರ್ದೇಶಿತ ಸದಸ್ಯರು ಹಾಗೂ ಜಿಲ್ಲೆಯ ಮಾವು ಮತ್ತು ಹಲಸು ಬೆಳೆಗಾರರು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ