ಅಡ್ಡಮತದಾನ ಮಾಡಲ್ಲ: ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್
Team Udayavani, Jun 10, 2022, 9:21 AM IST
ಬೆಂಗಳೂರು: ಇಂದು ನಡೆಯಲಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡಮತದಾನದ ಗೂಬೆ ಕೂರಿಸಿಕೊಂಡಿರುವ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಈಗ ಅಂತಿಮವಾಗಿ ಸ್ಪಷ್ಟನೆ ನೀಡಿದ್ದು, ತಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.
ಮತದಾನಕ್ಕೆ ಆಗಮಿಸುವುದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಅಡ್ಡಮತದಾನ ಮಾಡುವುದಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಅವರಿಗೇ ಮತ ಹಾಕುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಾನು ಇನ್ನೂ ಜೆಡಿಎಸ್ ನಲ್ಲಿ ಇದ್ದೇನೆ. ಆದರೆ ಪಕ್ಷ ನನ್ನನ್ನು ಹೊರ ಹಾಕುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದೆ. ಡಿಸೆಂಬರ್ ವರೆಗೆ ಕಾಯುತ್ತೇನೆ. ಆ ಬಳಿಕ ನನ್ನ ದಾರಿ ನಾನು ನೋಡಿಕೊಳ್ಳಲೇಬೇಕಲ್ಲ ಎಂದು ಹೇಳಿದರು.
ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಜಿ.ಟಿ.ದೇವೇಗೌಡ, ಶ್ರೀನಿವಾಸ್ ಗೌಡ ಸೇರಿದಂತೆ ಎಂಟು ಜನರು ಕಾಂಗ್ರೆಸ್ ಜತೆ ಸಂಪರ್ಕದಲ್ಲಿರುವ ಕಾರಣ ಈ ಚುನಾವಣೆಯಲ್ಲಿ ಅವರ ನಿರ್ಧಾರ ಮಹತ್ವ ಪಡೆದುಕೊಂಡಿದೆ.