ಮಗಳ ಹತ್ಯೆಗೆ ಯತ್ನ: ತಂದೆ ಬಂಧನ
Team Udayavani, Jun 28, 2022, 1:58 PM IST
ಬೆಂಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ ಐದು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆಗೈಯಲು ಯತ್ನಿಸಿದ್ದ ಆರೋಪಿಯನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ವೆಂಕಟೇಶ್ವರ ರಾವ್ (29) ಬಂಧಿತ.
ಆರೋಪಿ ನಗರದಲ್ಲಿ ಸಿವಿಲ್ ಗುತ್ತಿಗೆದಾರನಾಗಿದ್ದು, ಎಚ್ಎಎಲ್ ನಿವಾಸಿ ನಯನಾ ಅವರನ್ನು 2016ರಲ್ಲಿ ಮದುವೆಯಾಗಿದ್ದ. ನಯನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಹುಟ್ಟಿತೆಂಬ ಕಾರಣಕ್ಕೆ ಆರೋಪಿ, ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ. ಎರಡನೇ ಬಾರಿ ಗರ್ಭ ಧರಿಸಿದ್ದ ನಯನಾ, ಹೆರಿಗೆ ಗೆಂದು ತವರು ಮನೆಗೆ ಬಂದಿದ್ದರು. 10 ದಿನಗಳ ಹಿಂದೆಯಷ್ಟೇ ನಯನಾಗೆ ಹೆಣ್ಣು ಮಗು ಜನಿಸಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಜೂ.20ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ನಯನಾ ಹಾಗೂ ಅವರ ಕುಟುಂಬದವರ ಜತೆ ಗಲಾಟೆ ಮಾಡಿದ್ದ. ಆಗ ಅಲ್ಲೇ ಇದ್ದ ಐದು ವರ್ಷದ ಮೊದಲ ಮಗಳನ್ನು ಕತ್ತು ಹಿಸುಕಿ ಕೊಲೆಗೈಯಲು ಯತ್ನಿಸಿದ್ದಾನೆ.
ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡುತ್ತಿದ್ದಂತೆ ಪರಾರಿಯಾಗಿದ್ದ. ಗಲಾಟೆಯಲ್ಲಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.