ದ.ಕ., ಉಡುಪಿಯಲ್ಲಿ ಇಂದು ರೆಡ್ ಅಲರ್ಟ್: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ
Team Udayavani, Jul 7, 2022, 2:13 AM IST
ಮಂಗಳೂರು: ಕರಾವಳಿ ಭಾಗದಲ್ಲಿ ಜು. 7ರಂದು ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೊಷಿಸಿದ್ದು, ದ.ಕ. ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿರುವುದಲ್ಲದೆ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಜಿಲ್ಲೆ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ವಿಪತ್ತು ನಿರ್ವಹಣೆಗಾಗಿ ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತತ್ಕ್ಷಣ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದ್ದಾರೆ.
ಪ್ರವಾಸಿಗರು, ಸಾರ್ವಜನಿಕರು ನದಿ ತೀರಕ್ಕೆ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆದು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದಿದ್ದಾರೆ.
ಎನ್ಡಿಆರ್ಎಫ್,
ಎಸ್ಡಿಆರ್ಎಫ್ ಸನ್ನದ್ಧ
ಸಂಭಾವ್ಯ ಪ್ರಾಕೃತಿಕ ವಿಕೋಪಗಳನ್ನು ನಿರ್ವಹಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣ ದಳ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣ ದಳ (ಎಸ್ಡಿಆರ್ಎಫ್) ಸನ್ನದ್ಧವಾಗಿವೆ. ಎನ್ಡಿಆರ್ಎಫ್ನ 20 ಮಂದಿಯ ತಂಡ ಪಣಂಬೂರಿನಲ್ಲಿ ಮತ್ತು ಎಸ್ಡಿಆರ್ಎಫ್ನ 67 ಮಂದಿಯ ತಂಡ ಪಾಂಡೇಶ್ವರದಲ್ಲಿ ಸನ್ನದ್ಧವಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಒಂದು ಹೋಂ ಗಾರ್ಡ್ ತಂಡ ಸಿದ್ಧವಾಗಿದೆ.
ಮಂಗಳೂರಿನಲ್ಲಿ ಕಟ್ಟೆಚ್ಚರ
ರೆಡ್ ಅಲರ್ಟ್ ಘೊಷಣೆ ಮಾಡಿ ರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಮೇಯರ್ ಪ್ರೇಮಾನಂದ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಾಲಿಕೆಯ ಎಲ್ಲ ಶ್ರೇಣಿಯ ಅಧಿಕಾರಿಗಳು ಗುರುವಾರ ವಾರ್ಡ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.
ಸಚಿವ ಆರ್. ಅಶೋಕ್ ಭೇಟಿ
ದ.ಕ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಜು. 7ರಂದು ಕೊಡಗು ಹಾಗೂ ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10.30ಕ್ಕೆ ಮಡಿಕೇರಿ-ಸಂಪಾಜೆ ರಾ.ಹೆ. ಭೂಕುಸಿತ ವೀಕ್ಷಣೆ ನಡೆಸಿ 11.15ಕ್ಕೆ ಚೆಂಬು ಪ್ರದೇಶದಲ್ಲಿ ಭೂ ಕುಸಿತ ವೀಕ್ಷಣೆ, ಭೂಕಂಪನ ಮಾಪನ ಅಳವಡಿಸಿರುವ ಶಾಲೆಗೆ ಭೇಟಿ ನೀಡಿ ಪರಿಶೀಲಿಸುವರು. ಬಳಿಕ ಚೆಂಬು ಗ್ರಾ.ಪಂ.ನಲ್ಲಿ ಭೂಕಂಪನ ಬಗ್ಗೆ ಪರಿಶೀಲಿಸಲು ಆಗಮಿಸಿರುವ ವಿಜ್ಞಾನಿಗಳ ಸಮಿತಿಯೊಂದಿಗೆ ಚರ್ಚೆ ನಡೆಸುವರು.
ಮಧ್ಯಾಹ್ನ 1 ಗಂಟೆಗೆ ಸಂಪಾಜೆ ಅರಂತೋಡು ಭೂಕಂಪ ಪ್ರದೇಶಗಳಿಗೆ ಭೇಟಿ ನೀಡುವರು. ಸಂಜೆ 4ಕ್ಕೆ ಉಳ್ಳಾಲ ಸಮೀಪದ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ, 4.30ಕ್ಕೆ ಮಳೆಹಾನಿ, ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ದ.ಕ. ಜಿ.ಪಂ. ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.ಜಿಲ್ಲೆಯ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಜು. 7ರಂದು ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ದ.ಕ. ಜಿಲ್ಲೆ; ದಿನವಿಡೀ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಬಿರುಸಿನ ಮಳೆ ಮುಂದುವರಿದಿದೆ. ಮಂಗಳೂರು ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಚಾರ್ಮಾಡಿ, ಮಡಂತ್ಯಾರು, ಕೊಕ್ಕಡ, ವಿಟ್ಲ, ಬಂಟ್ವಾಳ, ಕನ್ಯಾನ, ಸುರತ್ಕಲ್, ಉಳ್ಳಾಲ, ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ.
ಬಜೊjàಡಿ ಬಳಿ ಮನೆಯೊಂದಕ್ಕೆ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ರಸ್ತೆ ಅಂಚು, ಕೊಯ್ಯೂರು ಶಾಲೆಯ ಆವರಣ ಗೋಡೆ, ಕೊಕ್ಕಡ ಬಳಿ ದೈವಸ್ಥಾನವೊಂದರ ಆವರಣ ಗೋಡೆ ಕುಸಿದಿದೆ. ತೊಡಿಕಾನ ಗ್ರಾಮದ ಬಾಳೆಕಜೆ ಬಳಿ ಗುಡ್ಡ ಕುಸಿದು ಸಂಪರ್ಕ ರಸ್ತೆ ಕಡಿತಗೊಂಡಿದೆ. ಪುತ್ತೂರು ತಾಲೂಕಿನ ಚೆಲ್ಯಡ್ಕದಲ್ಲಿ ಸೇತುವೆ ಮುಳುಗಡೆಯಾಗಿದೆ. ಸೋಮೇಶ್ವರದ ಉಚ್ಚಿಲ ಬಟ್ಟಪ್ಪಾಡಿ ಬಳಿ ಕಡಲ್ಕೊರೆತ ಮುಂದುವರಿದಿದೆ. ಬೀಚ್ ರಸ್ತೆ ಮತ್ತಷ್ಟು ಹಾನಿಯಾಗಿದೆ. ಉಳ್ಳಾಲ ಸೀ ಗ್ರೌಂಡ್ ಬಳಿ ಕಡಲ್ಕೊರೆತ ಮುಂದುವರಿದಿದೆ.
ಸಹಾಯ ವಾಣಿ
ಮಂಗಳೂರು ತಾಲೂಕು ಕಚೇರಿ: 0824 2220587/596
ಬಂಟ್ವಾಳ ತಾಲೂಕು ಕಚೇರಿ:
08255 232120/232500
ಪುತ್ತೂರು ತಾಲೂಕು ಕಚೇರಿ: 08251 230349/232799
ಬೆಳ್ತಂಗಡಿ ತಾಲೂಕು ಕಚೇರಿ: 08256 232047/233123
ಸುಳ್ಯ ತಾಲೂಕು ಕಚೇರಿ: 08257 230330/231231/298330
ಮೂಡುಬಿದಿರೆ ತಾಲೂಕು ಕಚೇರಿ: 08258 238100/239900
ಕಡಬ ತಾ. ಕಚೇರಿ: 08251 260435
ಮೂಲ್ಕಿ ತಾಲೂಕು ಕಚೇರಿ:
0824 2294496
ಉಳ್ಳಾಲ ತಾಲೂಕು ಕಚೇರಿ:
0824 2204424
ದ.ಕ. ಜಿಲ್ಲಾ ಕಂಟ್ರೋಲ್ ರೂಂ
ಜಿಲ್ಲಾಡಳಿತ ಕಚೇರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ,
ನಿಯಂತ್ರಣ ಕೊಠಡಿ: 1077/ 0824 2442590,
ಮೊ: 9483908000
ಮೆಸ್ಕಾಂ: 1912
ಮಂಗಳೂರು ಮಹಾನಗರ ಪಾಲಿಕೆ: 0824 2220306/319
ಜಿಲ್ಲೆಯ 88 ಕಡೆ ಕಾಳಜಿ ಕೇಂದ್ರ
ತಾಲೂಕು ಸಂಖ್ಯೆ
ಮಂಗಳೂರು 21
ಬಂಟ್ವಾಳ 11
ಪುತ್ತೂರು 07
ಬೆಳ್ತಂಗಡಿ 24
ಸುಳ್ಯ 08
ಮೂಡುಬಿದಿರೆ 07
ಕಡಬ 06
ಮೂಲ್ಕಿ 04
ಒಟ್ಟು 88