ಕಾಪು: ಬಂಡೆಗೆ ಢಿಕ್ಕಿ ಹೊಡೆದ ದೋಣಿ : ಐವರು ಮೀನುಗಾರರು ಪಾರು
Team Udayavani, Jul 27, 2022, 11:42 PM IST
ಕಾಪು : ಕಾಪು ಲೈಟ್ ಹೌಸ್ ಬಳಿಯಿಂದ ಹದಿನೈದು ಕಿ. ಮೀ. ದೂರದ ಕಾಪು ಪಾರ್ ಬಳಿ ತಾಂತ್ರಿಕ ದೋಷಕ್ಕೆ ಸಿಲುಕಿದ ಮೀನುಗಾರಿಕೆ ದೋಣಿಯೊಂದು ಬಂಡೆಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಢಿಕ್ಕಿಯ ರಭಸಕ್ಕೆ ದೋಣಿಯಲ್ಲಿದ್ದ ರಂಜೇಶ್, ಲಾರೆನ್ಸ್, ಮಾಧವ, ಧರ್ಮ ರಾಜ್ ಸೇರಿದಂತೆ 5 ಮಂದಿ ಮೀನುಗಾರರು ಚೆಲ್ಲಾಪಿಲ್ಲಿಯಾಗಿ ಹೋಗಿದ್ದು, ಪವಾಢ ಸಧೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೋಣಿಯ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಈ ಅವಘಡ ಸಂಭವಿ ಸಿದ್ದು ನಿಯಂತ್ರಣ ತಪ್ಪಿದ ಬಳಿಕ ಗಾಳಿಯ ರಭಸಕ್ಕೆ ಸಿಲುಕಿ ಪಾರ್ ಬಳಿಯ ಬಂಡೆಗೆ ಢಿಕ್ಕಿ ಹೊಡೆದಿದೆ. ದೋಣಿಯಲ್ಲಿದ್ದ ಮೀನುಗಾರರು ಈಜಾಡಿಕೊಂಡು ಪಾರ್ ಬಳಿಯ ಬಂಡೆಯಲ್ಲಿ ರಕ್ಷಣೆ ಪಡೆದಿದ್ದರು.
ಅಪಘಾತಕ್ಕೊಳಗಾಗಿದ್ದ ದೋಣಿ ಯಲ್ಲಿದ್ದ ಮೀನುಗಾರರನ್ನು ಬೇರೊಂದು ದೋಣಿಯ ಸಹಾಯ ದೊಂದಿಗೆ ಮಲ್ಪೆಗೆ ಕರೆತರಲಾಗಿದ್ದು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಕಳುಹಿಸ ಲಾಗಿದೆ ಎಂದು ತಿಳಿದು ಬಂದಿದೆ.