ಕುಣಿಗಲ್: ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಯುವಕ; ಮರವೇರಿ ಪ್ರಾಣ ರಕ್ಷಣೆ
Team Udayavani, Aug 4, 2022, 12:01 PM IST
ಸಾಂದರ್ಭಿಕ ಚಿತ್ರ
ಕುಣಿಗಲ್: ನೀರಿನಲ್ಲಿ ಹೋಗುತ್ತಿದ್ದ ಯುವಕನೋರ್ವ ಮರವೇರಿ ತನ್ನ ಪ್ರಾಣವನ್ನು ತಾನೇ ರಕ್ಷಣೆ ಮಾಡಿಕೊಂಡ ಘಟನೆ ತಾಲೂಕಿನ ಎಡಿಯೂರು ಹೋಬಳಿ ದೊಂಬರಹಟ್ಟಿ ಉರ್ಕೇಹಳ್ಳಿ ಸೇತುವೆ ಬಳಿ ಗುರುವಾರ(ಆ.4) ಸಂಭವಿಸಿದೆ.
ಅಮೃತೂರು ಹೋಬಳಿ ಹಾಲಗೆರೆ ಎಸ್. ಅರುಣ್ (26) ಮರ ಏರಿ ಪ್ರಾಣ ರಕ್ಷಿಸಿಕೊಂಡ ಯುವಕ.
ಘಟನೆ ವಿವರ: ಕೆಲಸದ ನಿಮಿತ್ತ ಕುಣಿಗಲ್ ಗೆ ಬಂದಿದ್ದ ಯುವಕ ಬಳಿಕ ತನ್ನ ಸ್ವಗ್ರಾಮ ಹಾಲಗೆರೆ ಗ್ರಾಮಕ್ಕೆ ವಾಪಸ್ ಹೋಗುವ ಸಂದರ್ಭದಲ್ಲಿ ದೊಂಬರಹಟ್ಟಿ ಹಾಗೂ ಉರ್ಕೇಹಳ್ಳಿ ಸೇತುವೆ ಕೆಳ ಭಾಗದ ರಸ್ತೆಯಲ್ಲಿ ಮೂರು ಅಡಿಗೂ ಅಧಿಕ ನೀರು ಹರಿಯುತ್ತಿತ್ತು. ಈ ವೇಳೆ ಆತ ಬೈಕ್ ನಲ್ಲಿ ಹೋಗುತ್ತಿದ್ದಾಗ ನೀರಿನ ರಭಸಕ್ಕೆ ದ್ವಿಚಕ್ರ ವಾಹನದೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗಲಿದ್ದ. ಆದರೆ ಆ ಮಾರ್ಗದಲ್ಲಿ ಮರ ಸಿಕ್ಕ ಕಾರಣ ಯುವಕ ಮರ ಏರಿ ಕುಳಿತಿದ್ದು, ದ್ವಿಚಕ್ರ ವಾಹನ ನೀರಿನಲ್ಲಿ ಕೋಚ್ಚಿ ಹೋಗಿದೆ.
ಯುವಕನ ಕಿರುಚಾಟ ಕೇಳಿ ಸ್ಥಳಿಯರು ಕುಣಿಗಲ್ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ಆಗಮಿಸಿ, ಯುವಕನ್ನು ರಕ್ಷಿಸಿದ್ದಾರೆ.