ಹೊಸ ದಾರಿಯಲ್ಲಿದ್ದಾರೆ ಕಾಶ್ಮೀರ ಯುವಕರು; ಬಂದೂಕು ಕೆಳಗಿಟ್ಟು ಜೀವನ ಕಟ್ಟಿಕೊಂಡರು!
Team Udayavani, Aug 6, 2022, 7:20 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಶುಕ್ರವಾರಕ್ಕೆ ಮೂರು ವರ್ಷ ಪೂರ್ತಿಯಾಗಿದೆ.
ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಅಲ್ಲಿ ಯುವಕರು ಹಿಂಸೆಯ ದಾರಿಯನ್ನು ಬಿಟ್ಟು ಉದ್ಯೋಗ ಹುಡುಕೊಂಡು ನೆಮ್ಮದಿಯ ಜೀವನ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ಅಲ್ಲಿ ಈಗ ಹೊಸ ಕಾಶ್ಮೀರ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದೆ. ಪ್ರತ್ಯೇಕತಾವಾದಿ ಸಂಘಟನೆಗಳ ಮುಖಂಡರ ಮಾತುಕೇಳಿ ತಪ್ಪು ದಾರಿ ಹಿಡಿದಿದ್ದ ಯುವಕರು ಉಗ್ರತ್ವದ ದಾರಿಗೆ ವಿದಾಯ ಹೇಳುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಜೆಕೆಇಡಿಐ)ದ ಮೂಲಕ ಯುವಕ-ಯುವತಿಯರಿಗೆ ಜೀವನದ ದಾರಿಯನ್ನು ಕಂಡುಕೊಳ್ಳುವ ಹೊಸ ದಾರಿಯನ್ನು ಕಂಡುಕೊಳ್ಳಲು ನೆರವಾಗುತ್ತಿದೆ.
ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಗ್ರಾಮದ ಯಾಸ್ಮಿàನಾ ಆಗ ಅಡುಗೆಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜತೆಗೆ ಬೇಕರಿ ಉತ್ಪನ್ನಗಳನ್ನು ಸಿದ್ಧಗೊಳಿಸಿ ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಕುಟುಂಬ ಸದಸ್ಯರು ಅದನ್ನು ಪ್ರಶ್ನಿಸಿದ್ದರು.
ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದಿಂದ ಸೂಕ್ತ ತರಬೇತಿ ಪಡೆದ ಬಳಿಕ ತಮ್ಮ ಕೆಲಸಕ್ಕೆ ಹೆಚ್ಚಿನ ವೃತ್ತಿಪರತೆ ಬಂತು ಮತ್ತು ಆದಾಯದಲ್ಲಿಯೂ ವೃದ್ಧಿಯಾಯಿತು.
ನಾಗರಿಕ ಸೇವಾ ಪರೀಕ್ಷೆಗಳಲ್ಲಿಯೂ ಕೂಡ ಕಾಶ್ಮೀರದ ಯುವಕ-ಯುವತಿಯರು ಹೆಚ್ಚಿನ ಸಾಧನೆ ಮಾಡಲಾರಂಭಿಸಿದ್ದಾರೆ. ಅದಕ್ಕೊಂದು ಉದಾಹರಣೆ ಎಂದರೆ ವಾಸೀಂ ಅಹ್ಮದ್ ಭಟ್ 2020ರಲ್ಲಿ ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 225ನೇ ರ್ಯಾಂಕ್ ಬಂದಿದ್ದರು. ಯುಪಿಎಸ್ಸಿ ಪರೀಕ್ಷೆ ಬರೆಯಲು ಅತ್ಯಂತ ಶ್ರದ್ಧೆ ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ.
ಇಷ್ಟು ಮಾತ್ರವಲ್ಲ ಸ್ಥಳೀಯ ಉತ್ಪನ್ನಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸ್ವಸಹಾಯ ಸಂಘಟನೆಗಳನ್ನೂ ರಚಿಸಿಕೊಂಡಿದ್ದಾರೆ. ಪುಲ್ವಾಮಾದ ಪಾಂಪೊರ್ ಪ್ರದೇಶದಲ್ಲಿ ಅದು ಕಾರ್ಯಾಚರಿಸುತ್ತಿದೆ. ರೆಸ್ಟಾರೆಂಟ್ ಮತ್ತು ಸ್ಥಳೀಯ ಮಳಿಗೆಗಳಿಗೆ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ಕಾನೂನು ಸುವ್ಯವಸ್ಥೆ ಗಣನೀಯ ಸುಧಾರಣೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿ ಇರುವ ಸಮಸ್ಯೆಗಳು ಶೇ.88 ಕಡಿಮೆಯಾಗಿವೆ. 2016ರ ಆ.5ರಿಂದ 2019 ಆ.4ರ ವರೆಗೆ 3,686 ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು ಎದುರಾಗಿದ್ದವು. ಈ ಅವಧಿಯಲ್ಲಿ 124 ಮಂದಿ ನಾಗರಿಕರು ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ ಆರು ಮಂದಿ ಪೊಲೀಸರು ಮತ್ತು ಭದ್ರತಾ ಪಡೆಗೆ ಸೇರಿದವರು ಹುತಾತ್ಮರಾಗಿದ್ದಾರೆ. ಆದರೆ, 2019ರ ಆ.5ರ ಬಳಿಕ 438 ಪ್ರಕರಣಗಳು ದೃಢಪಟ್ಟಿವೆ ಮತ್ತು ನಾಗರಿಕರು ಅಸುನೀಗಿಲ್ಲ ಎಂದು ಕೇಂದ್ರಾಡಳಿತ ಪ್ರದೇಶದ ಪೊಲೀಸ್ ದಾಖಲೆಗಳಲ್ಲಿ ಪ್ರಸ್ತಾಪಿಸಲಾಗಿದೆ.
ಜತೆಗೆ 930 ಉಗ್ರ ಪ್ರಕರಣಗಳು ವರದಿಯಾಗಿವೆ. ಸ್ಥಾನಮಾನ ವಾಪಸ್ ಪಡೆದ ಬಳಿಕ 617 ಉಗ್ರ ಪ್ರಕರಣಗಳು ದೃಢಪಟ್ಟಿವೆ. 2019ಕ್ಕಿಂತ ಮೊದಲು 290 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರೆ, 2019ರ ಆ.5ರ ಬಳಿಕ 174 ಮಂದಿ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
75 ವರ್ಷಗಳ ನಂತರ ಸಿಕ್ಕಿತು ರಸ್ತೆ ಭಾಗ್ಯ
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಆ ಹಳ್ಳಿಗೆ ರಸ್ತೆಯೇ ಬಂದಿರಲಿಲ್ಲ. ಗ್ರಾಮಸ್ಥರು ಆಸ್ಪತ್ರೆ, ಶಾಲೆ, ಮಾರುಕಟ್ಟೆ ಸೇರಿ ಯಾವುದೇ ಪ್ರಮುಖ ಸ್ಥಳಕ್ಕೆ ತೆರಳಬೇಕೆಂದರೂ ಬರೋಬ್ಬರಿ 12-14ಕಿ.ಮೀ. ನಡೆದು ಸಾಗಬೇಕಿತ್ತು. ಇದೀಗ ಆ ಗ್ರಾಮಕ್ಕೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡಿಕೊಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬುಧಾಲ್ ಗ್ರಾಮ ಇದೀಗ ರಸ್ತೆ ಕಂಡಿರುವ ಊರು. ಈ ಗ್ರಾಮಕ್ಕೆ 13 ಕಿ.ಮೀ. ದೂರದಲ್ಲಿ ಧಲೋರಿ ನಗರವಿದೆ. ಇಲ್ಲಿನ ಜನರಿಗೆ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ತೆರಳಬೇಕೆಂದರೆ, ಯಾರಾದರೂ ಅವರನ್ನು ಹೊತ್ತು ಗುಡ್ಡಗಳನ್ನು ಹತ್ತಿಳಿದು ಸಾಗಬೇಕಿತ್ತು. ಅದಕ್ಕೆಂದೇ 3ರಿಂದ 4 ತಾಸು ಮೀಸಲಿಡಬೇಕಿತ್ತು. ಹಾಗೆಯೇ ಅಲ್ಲಿನ ವಿದ್ಯಾರ್ಥಿಗಳು ಧಲೋರಿಯ ಪ್ರೌಢಶಾಲೆಗೆ ನಡೆದೇ ಸಾಗಬೇಕಿತ್ತು. ಆದರೆ ಇದೀಗ ಗ್ರಾಮಕ್ಕೆ ಒಟ್ಟು 13 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಿಕೊಡಲಾಗಿದೆ. ಇದರಿಂದಾಗಿ ಬದುಕು ಸರಾಗವಾಗಿ ಎಂದು ಕೇಂದ್ರ ಸರ್ಕಾರಕ್ಕೆ ನಮಿಸಲಾರಂಭಿಸಿದ್ದಾರೆ ಗ್ರಾಮಸ್ಥರು.