ಅಡಚಣೆ ರಹಿತ ವಿದ್ಯುತ್ಗಾಗಿ 400 ಕಿ.ವ್ಯಾ. ಉಪಕೇಂದ್ರ : ಸಚಿವ ಸುನಿಲ್ ಕುಮಾರ್
Team Udayavani, Aug 16, 2022, 9:06 AM IST
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸದ್ಯ 750 ಮೆಗಾವ್ಯಾಟ್ ವಿದ್ಯುತ್ಗೆ ಬೇಡಿಕೆಯಿದ್ದು, ಮುಂದಿನ 5ರಿಂದ 8 ವರ್ಷಗಳಲ್ಲಿ 250ಕ್ಕಿಂತ ಹೆಚ್ಚು ಮೆ.ವ್ಯಾ. ವಿದ್ಯುತ್ ಬೇಡಿಕೆ ಬರಲಿದೆ. ಅಡಚಣೆ ರಹಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ 300 ಕೋ.ರೂ. ವೆಚ್ಚದಲ್ಲಿ 400 ಕಿ.ವ್ಯಾ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ನೆಹರೂ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ 17 ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮುಂದೆ 79 ಹೆಚ್ಚುವರಿ ಕೇಂದ್ರ ಸ್ಥಾಪಿಸಲಾಗುವುದು. ತೆಂಕ ಎಡಪದವಿನಲ್ಲಿ ಎಂಆರ್ಎಫ್ ಘಟಕ ಸ್ಥಾಪನೆ ಹಾಗೂ ಈ ವರ್ಷ ಬೆಳ್ತಂಗಡಿಯ ಉಜಿರೆ, ಪುತ್ತೂರಿನ ಕೆದಂಬಾಡಿ, ಬಂಟ್ವಾಳದ ನರಿಕೊಂಬಿನಲ್ಲಿ 3 ಹೆಚ್ಚುವರಿ ಎಂಆರ್ಎಫ್ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ
ರಾಮಕುಂಜದಲ್ಲಿ ಗೋಶಾಲೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಪುಂಜಾಲಕಟ್ಟೆಯಲ್ಲಿ ನಾರಾಯಣಗುರು ವಸತಿ ಶಾಲೆ ಸ್ಥಾಪನೆ, ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಗುತ್ತದೆ ಎಂದರು.
ಗ್ರಾಮೀಣ ರಸ್ತೆ ಪುನರ್ ನಿರ್ಮಾಣ
ಪ್ರಕೃತಿ ವಿಕೋಪ ನಿರ್ವಹಣ ಕಾರ್ಯ ಕ್ರಮದಡಿ ಜಿಲ್ಲೆಗೆ ಸರಕಾರದಿಂದ 25 ಕೋ.ರೂ. ಬಿಡುಗಡೆಗೊಳಿಸಲಾಗಿದೆ. 900 ಕಿ.ಮೀ. ಗ್ರಾಮೀಣ ರಸ್ತೆಗಳ ಮರುನಿರ್ಮಾಣಕ್ಕೆ 110 ಕೋ.ರೂ. ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಜಕ್ರಿಬೆಟ್ಟಿನಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು 135 ಕೋ.ರೂ. ಮೀಸಲಿಡಲಾಗಿದೆ ಎಂದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್, ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ, ಡಿಸಿಪಿ ಅನ್ಸುಕುಮಾರ್, ದಿನೇಶ್ ಕುಮಾರ್, ಪಾಲಿಕೆ ಆಯುಕ್ತ ಅಕ್ಷಯ… ಶ್ರೀಧರ್, ಮುಖ್ಯಸಚೇತಕ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯ ಅಭಿವೃದ್ಧಿಗಾಗಿ “ಕನಸಿನ, ಆಕರ್ಷಣೀಯ ಮತ್ತು ಅಭಿವೃದ್ಧಿ ಪಥದ ಮಂಗಳೂರು’ ಎಂಬ ಮೂರು ಪ್ರಮುಖ ಅಂಶಗಳೊಂದಿಗೆ ವಿವಿಧ ಯೋಜನೆಗಳನ್ನು ಸಚಿವ ಸುನಿಲ್ ಪ್ರಕಟಿಸಿದರು.