ಜಂಬೂಸವಾರಿ ಮೆರವಣಿಗೆಯಲ್ಲಿ ವಿಜಯನಗರ ಸಾಮ್ರಾಜ್ಯ ವೈಭವ
ದಕ್ಷಿಣ ಕನ್ನಡದಿಂದ ಗೋಮಟೇಶ್ವರ, ಉಡುಪಿಯಿಂದ ಮೀನುಗಾರಿಕೆ ಸ್ತಬ್ಧಚಿತ್ರ
Team Udayavani, Sep 19, 2022, 6:35 AM IST
ಮೈಸೂರು: ದಸರಾ ಮಹೋತ್ಸವದ ಕೊನೆಯ ದಿನ ವಾದ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ಹೊಯ್ಸಳರ ಕಾಲದ ಸೋಮನಾಥಪುರದ ಚೆನ್ನಕೇಶವ ದೇಗುಲದ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವ ಅನಾವರಣಗೊಳ್ಳಲಿದೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ವಿಶೇಷವಾಗಿ ನಡೆಸಲಾಗುತ್ತಿದೆ. ಈ ಬಾರಿ ರಾಜ್ಯದ ಪ್ರಮುಖ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳು, ರಾಜ್ಯದ ಎಲ್ಲ ಜಿಲ್ಲೆಗಳ ಐತಿಹಾಸಿಕ ಮತ್ತು ಪ್ರಾಕೃತಿಕ ತಾಣಗಳನ್ನು ಪರಿಚಿಸುವ ಹಲವು ಸ್ತಬ್ಧಚಿತ್ರಗಳು ಆಕರ್ಷಿಸಲಿವೆ. ಆಯಾ ಜಿಲ್ಲೆಯ ಜಿಐ (ಜಿಯಾಗ್ರಾಫಿಕಲ್ ಇಂಡಿಕೇಷನ್), ಕನ್ನಡ ನಾಡು-ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.
ರಾಜ್ಯದ ಜಿಲ್ಲೆಗಳಿಂದ ಒಂದರಂತೆ 31 ಸಹಿತ ವಿವಿಧ ಇಲಾಖೆಗಳದ್ದೂ ಸೇರಿ ಒಟ್ಟು 43 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಗೋಮಟೇಶ್ವರ, ಉಡುಪಿಯಿಂದ ಮೀನುಗಾರಿಕೆ, ಉತ್ತರ ಕನ್ನಡದ ಪ್ರಾಕೃತಿಕ ಸೊಬಗು, ಚಿಕ್ಕಮಗಳೂರಿನ ಐತಿಹಾಸಿಕ ತಾಣಗಳು, ಮಂಡ್ಯದ ಧಾರ್ಮಿಕ ಸ್ಥಳಗಳು, ಕೊಡಗು ಜಿಲ್ಲೆಯ ಕೊಡವರ ವೀರ ಪರಂಪರೆ, ಚಾಮ ರಾಜನಗರದಿಂದ ವನ್ಯಸಂಪತ್ತು, ಶಿವಮೊಗ್ಗದಿಂದ ಶರಣಪರಂಪರೆಯ ಶ್ರೇಷ್ಠ ಶರಣರಾದ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಒಳಗೊಂಡ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿರಲಿವೆ.