ಉಡುಪಿ: ಅಂತರ್ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ ಪೊಲೀಸರು
Team Udayavani, Sep 22, 2022, 12:48 AM IST
ಉಡುಪಿ: ಅಂತರ್ಜಿಲ್ಲಾ ಬೈಕ್ ಕಳವು ಪ್ರಕರಣದ ಆರೋಪಿ ಗದಗ ಜಿಲ್ಲೆಯ ಗೋವಿಂದಪ್ಪ ಹೇಮಣ್ಣ ಪೂಜಾರ ಯಾನೆ ಗಿರೀಶ್ (29)ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜ. 31ರಂದು ಸಾಯಿಧಾಮ ಅಪಾರ್ಟ್ಮೆಂಟ್ನ ಇ-ಕಾರ್ಟ್ ಸಂಸ್ಥೆಯ ಡೆಲಿವರಿ ಬಾಯ್ ಗಣೇಶ್ ನಿಲ್ಲಿಸಿದ್ದ ಸ್ಕೂಟರ್ ಹಾಗೂ ಅದರಲ್ಲಿದ್ದ ಮೊಬೈಲ್ ಫೋನ್, ಮಿಕ್ಸರ್ ಗ್ರೈಂಡರ್, ಇತರ ಪಾರ್ಸೆಲ್ ಸಹಿತ ಒಟ್ಟು 80 ಸಾವಿರ ರೂ. ಮೌಲ್ಯದ ವಸ್ತುಗಳಾಗಿವೆ ಎಂದು ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿ ಟಿವಿ ಫುಟೇಜ್, ಸಿಡಿಆರ್ ಆಧಾರದ ಮೇಲೆ ತನಿಖೆ ಕೈಗೊಂಡಿದ್ದರು. ಠಾಣೆಯ ಸಿಬಂದಿ ಎಎಸ್ಐ ಜಯಕರ, ಎಚ್ಸಿ ಸತೀಶ್ ಬೆಳ್ಳೆ, ಪಿಸಿಗಳಾದ ಕಿರಣ್, ಹೇಮಂತ್ ಅವರು ಆರೋಪಿಯನ್ನು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯು ದೊಡ್ಡಣಗುಡ್ಡೆ ಮತ್ತು ಸೋದೆ ಮಠದ ಬಳಿಯಿಂದ ಕೂಡ ಬೈಕ್ ಹಾಗೂ ಸ್ಕೂಟರ್ಗಳ ಕಳ್ಳತನ, ಮಂಗಳೂರಿನ ಬಂದರು ಪೊಲೀಸ್ ಠಾಣೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾನೆ. ಈತನ ವಿರುದ್ಧ ರಾಣಿಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, 7 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಆತನಿಂದ ಸುಮಾರು 2 ಲ.ರೂ. ಮೌಲ್ಯದ 5 ಬೈಕ್, ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಆದೇಶದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ ಎಸ್. ನಾಯ್ಕ, ನಗರ ಠಾಣೆಯ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಮಾರ್ಗದರ್ಶನದಂತೆ ಸಿಬಂದಿ, ಎಎಸ್ಐ ವಾಸಪ್ಪ ನಾಯ್ಕ ಸಹಕರಿಸಿದ್ದಾರೆ.