ಬೆಳ್ತಂಗಡಿ : ಗೂಡ್ಸ್ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ ಪತ್ತೆ
ತೆಂಕಕಾರಂದೂರಿನಲ್ಲಿ ಕೇರಳದ ಇಬ್ಬರ ಬಂಧನ
Team Udayavani, Oct 14, 2022, 5:21 PM IST
ವೇಣೂರು: ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ ಬಿ. ಅವರ ತಂಡ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳದ ಕಾಸರಗೋಡಿನ ವರ್ಕಾಡಿ ಆಯಿಷಾ ಅಪಾರ್ಟ್ಮೆಂಟ್ ನಿವಾಸಿ ಮಹಮ್ಮದ್ ಅಶ್ರಫ್ (34) ಹಾಗೂ ಕೇರಳದ ವರ್ಕಾಡಿ ಪಾವೂರು ಕ್ವಾಟ್ರಸ್ ಎದುರಿನ ನಿವಾಸಿ ಅಬುಲ್ ಲತೀಫ್ ಕೆ. (36) ಬಂಧಿತ ಆರೋಪಿಗಳು.
ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಗೂಡ್ಸ್ ತ್ರಿಚಕ್ರ ವಾಹನದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ. ಅವರು ಸಿಬಂದಿಗಳೊಂದಿಗೆ ತೆಂಕಕಾರಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.ಆರೋಪಿತರ ವಶದಲ್ಲಿದ್ದ ಸುಮಾರು ರೂ. 30,000 ಮೌಲ್ಯದ 805.00 ಗ್ರಾಂ ತೂಕದ ಮಾದಕ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನ್ಯ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನವಣೆ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಆಧೀಕ್ಷಕರಾದ ಡಾ. ಕುಮಾರಚಂದ್ರ ರವರ ನಿರ್ದೇಶನದಂತೆ, ಬಂಟ್ವಾಳ ಡಿ.ವೈಎಸ್.ಪಿ ಪ್ರಥಾಪ್ ಸಿಂಗ್ ತೊರಾಟ್ ರವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ. ರವರು ಹಾಗೂ ವೇಣೂರು ಠಾಣಾ ಪಿ.ಎಸ್.ಐ ಸೌಮ್ಯ ಜೆ, ಮತ್ತು ವೃತ್ತ ಕಛೇರಿಯ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಇಬ್ರಾಹಿಂ, ಚೌಡಪ್ಪ, ಸುನಿಲ್ ಹಪ್ಪಳ್ಳಿ, ಮತ್ತು ಜೀಪು ಚಾಲಕ ಮಹಮ್ಮದ್ ಅಸೀಫ್, ಲಾರೆನ್ಸ್ ಹಾಗೂ ವೇಣೂರು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ವೆಂಕಟೇಶ್ ನಾಯ್ಕ್, ರವೀಂದ್ರ, ಪಂಪಾಪತಿ, ಕೇಶವತಿ, ಶಶಿಕುಮಾರ್, ಶ್ರೀನಿವಾಸ, ತ್ರಿಮೂರ್ತಿ, ಹನುಮಂತ, ಹಾಗೂ ಲತಾರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.