ಯಾತ್ರೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಭರ್ಜರಿ ದೌಡ್?
ಮಂಜಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವುದು ಜಗಜ್ಜಾಹೀರು.
Team Udayavani, Oct 18, 2022, 5:38 PM IST
ದಾವಣಗೆರೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯನ್ನು ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿತರು ಭರ್ಜರಿ ವೇದಿಕೆಯನ್ನಾಗಿ ಬಳಸಿಕೊಂಡರೇ? ಇಂತಹದ್ದೊಂದು ವಿಷಯ ಈಗ ಜನರ ಚರ್ಚೆಗೆ ಗ್ರಾಸವಾಗಿದೆ.
ಪಾದಯಾತ್ರೆ ಕರ್ನಾಟಕ ಪ್ರವೇಶಿಸಿ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹಾದುಹೋಗುವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಟಿಕೆಟ್ ಆಕಾಂಕ್ಷಿತರು ರಾಹುಲ್ ಗಾಂಧಿಯವರ ಮನ ಗೆಲ್ಲುವ ಯತ್ನ ಮಾಡಿದ್ದು ಗುಪ್ತವಾಗೇನೂ ಉಳಿದಿಲ್ಲ. ಬೆಲೆ ಏರಿಕೆ, ಕೇಂದ್ರ-ರಾಜ್ಯ ಸರಕಾರದ ಭ್ರಷ್ಟಾಚಾರ, ಕೋಮುವಾದ ಹೀಗೆ ಹಲವು ವಿಷಯಗಳನ್ನಿಟ್ಟುಕೊಂಡು ಒಡೆದ ಮನಸ್ಸುಗಳ ಒಗ್ಗೂಡಿಸುವ ಮಹತ್ತರ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಸೇರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಆದಿಯಾಗಿ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಇದು ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ
ಪೂರ್ವಭಾವಿಯಾಗಿ ನಡೆಸುತ್ತಿರುವುದು ಎಂದೂ ವಿಶ್ಲೇಷಿಸಲಾಗುತ್ತಿದೆ. ಈ ಯಾತ್ರೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಬಹುತೇಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ದಾವಣಗೆರೆ ಜಿಲ್ಲೆಯಲ್ಲೇ ಭಾರೀ ಬೇಡಿಕೆ ಹೊಂದಿರುವ ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳು ಪಾದಯಾತ್ರೆಯಲ್ಲಿ ಶಕ್ತ್ಯಾನುಸಾರ ತಮ್ಮ ಕಡೆಯ ಕಾರ್ಯಕರ್ತರು, ಅಭಿಮಾನಿಗಳನ್ನು ಕೊಂಡೊಯ್ದು ವಿಶೇಷ ಗಮನ ಸೆಳೆದರು. ಮಾಯಕೊಂಡ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಇನ್ನಿಲ್ಲದ ಪೈಪೋಟಿ ಇದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 3 ಸಾವಿರಕ್ಕೂ ಅಧಿಕ ಮತಗಳಲ್ಲಿ ಪರಾಜಯಗೊಂಡಿರುವ ಆನಗೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಸದಸ್ಯ ಎಚ್. ದುಗ್ಗಪ್ಪ, ಕೆ.ಎಸ್. ಬಸವಂತಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಈಗ ಕಾಂಗ್ರೆಸ್ ಸೇರಿರುವ ಎಚ್. ಆನಂದಪ್ಪ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ, ಮಾಜಿ ಸಚಿವ ಕೆ. ಶಿವಮೂರ್ತಿ, ಮಾಜಿ
ಮುಖ್ಯಮಂತ್ರಿ ಜೆ.ಎಚ್. ಪಟೇಲ್ ರವರ ಸಂಬಂಧಿ ಡಾ| ಸವಿತಾ ಮಲ್ಲೇಶ್ ನಾಯ್ಕ್ ಹೀಗೆ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿರುವವರ ಸಾಲೇ ಇದೆ. ಪಾದಯಾತ್ರೆ ನೆರೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗಿದ ಎಲ್ಲೆಡೆ ಟಿಕೆಟ್ ಆಕಾಂಕ್ಷಿಗಳ ಸಮೂಹವೇ ನೆರೆದಿತ್ತು.
ರಾಹುಲ್ ಗಾಂಧಿ ಅವರನ್ನು ಪರಿಚಯಿಸಿಕೊಳ್ಳುವ ಜೊತೆಗೆ ತಮ್ಮ ಇರಾದೆ ತಿಳಿಸುವುದಕ್ಕಾಗಿ ಪ್ರತಿ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿನ ಜನರನ್ನು ಪಾದಯಾತ್ರೆಗೆ ಕರೆದೊಯ್ಯಲಾಗಿತ್ತು. ತಮ್ಮೊಟ್ಟಿಗೆ ಬಂದಿದ್ದವರಿಗೆ ತಿಂಡಿ, ಊಟೋಪಚಾರ ಖರ್ಚನ್ನೆಲ್ಲ ಆಕಾಂಕ್ಷಿತರೇ ಭರಿಸಿದರು ಎಂಬುದು ಬಹಿರಂಗವಾಗಿಯೇ ಚರ್ಚೆಯಾಗುತ್ತಿದೆ. ಅಲ್ಲದೇ ತಮಗೆ ಬಹಳ ಪರಿಚಯ ಇರುವ ಮುಖಂಡರ ಮೂಲಕ ಅನೇಕರು ರಾಹುಲ್ ಗಾಂಧಿಯವರನ್ನು ಕಂಡು ಮಾತನಾಡಿಸುವಲ್ಲೂ ಯಶಸ್ವಿಯಾದರು. ಆಕಾಂಕ್ಷಿತರ ಈ ಎಲ್ಲ ಪ್ರಯತ್ನ ಫಲ ನೀಡಲಿದೆಯೇ ಸ್ಪಷ್ಟವಾಗಿ ಹೇಳುವಂತಿಲ್ಲ. ಆದರೂ ಅನೇಕ ಟಿಕೆಟ್ ಆಕಾಂಕ್ಷಿತರು ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹಾಗೂ ಟಿಕೆಟ್ ಬಯಕೆಯನ್ನು ಪರೋಕ್ಷವಾಗಿ ತಿಳಿಸಲು ಪರಿವರ್ತಿಸಿಕೊಂಡಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.
ಮಾಯಕೊಂಡ ಮಾತ್ರವಲ್ಲ ಹರಿಹರ, ಹೊನ್ನಾಳಿ, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹರಪನಹಳ್ಳಿ, ದಾವಣಗೆರೆ ದಕ್ಷಿಣದಲ್ಲಿ ಪರೋಕ್ಷವಾಗಿ
ಬದಲಾವಣೆ ಬಯಸುತ್ತಿರುವವರು ಎಲ್ಲರೂ ಪಾದಯಾತ್ರೆಯುದ್ದಕ್ಕೂ ತಮ್ಮದೇ ಆದ ರಾಜಕೀಯಪಟ್ಟುಗಳ ಪ್ರದರ್ಶನ ಮಾಡಿದರು ಎನ್ನಲಾಗಿದೆ.
ಹೊನ್ನಾಳಿ ಕ್ಷೇತ್ರದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವುದು ಜಗಜ್ಜಾಹೀರು. ಹಾಗಾಗಿ ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಇವರು ಸುಸಂದರ್ಭವನ್ನಾಗಿಸಿಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುವ ಮೂಲಕ ಹೈಕಮಾಂಡ್ ಗಮನ ಸೆಳೆದಿದ್ದಾರೆ.
ಇನ್ನು ಹರಿಹರ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್. ರಾಮಪ್ಪ ಇದ್ದರೂ ಜಿಪಂ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ನಾಗೇಂದ್ರಪ್ಪ, ವಿಟಿಯುನ ವಿಶ್ರಾಂತ ಕುಲಪತಿ ಡಾ| ಎಚ್. ಮಹೇಶ್ವರಪ್ಪ ಇತರರು ಟಿಕೆಟ್ಗೆ ಒಂದು ಕೈ ನೋಡೋಣ ಎಂದು ಪಾದಯಾತ್ರೆಯನ್ನು ಪ್ರಥಮ ಹೆಜ್ಜೆಯನ್ನಾಗಿಸಿಕೊಂಡರು ಎಂದು ತಿಳಿದುಬಂದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಲ್ಲೂ ಟಿಕೆಟ್ಗಾಗಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಇಬ್ಬರೂ ಪುತ್ರಿಯರು ಪ್ರಯತ್ನ ನಡೆಸುತ್ತಿದ್ದಾರೆ. ಚಿತ್ರದುರ್ಗದ ಜೊತೆಗೆ ಬಳ್ಳಾರಿಯಲ್ಲೂ ರಾಹುಲ್ಗಾಂಧಿ ಪಾದಯಾತ್ರೆ ನಡೆದಿದ್ದು ಆಕಾಂಕ್ಷಿಗಳಿಗೆ ಡಬ್ಬಲ್ ಅವಕಾಶ ಮಾಡಿಕೊಟ್ಟಿದೆ. ಎಂ.ಟಿ. ಸುಭಾಶ್ಚಂದ್ರ ಅವರು ಸಹ ಟಿಕೆಟ್ ಕಸರತ್ತಿಗೆ ಪಾದಯಾತ್ರೆ ವೇದಿಕೆಯನ್ನಾಗಿಸಿಕೊಂಡರು.
ರಾಹುಲ್ ಗಾಂಧಿಯವರ ಪಾದಯಾತ್ರೆ ರಾಜಕಾರಣದ ವೇದಿಕೆಯಲ್ಲ ಎಂದು ಹೇಳಿದರೂ ಟಿಕೆಟ್ ಆಕಾಂಕ್ಷಿತರು ಬಲ ಪ್ರದರ್ಶನ ತೋರಿಸುವಲ್ಲಿ ಹಿಂದೆ ಬೀಳದೇ ಇರುವುದು ಮುಂದೇನಾಗುತ್ತದೋ ಎಂಬ ಕುತೂಹಲ ಮೂಡಿಸಿದೆ. ಟಿಕೆಟ್ ಘೋಷಣೆಯವರೆಗೂ ಇಂತಹ ಹಲವು ಕಸರತ್ತುಗಳು ಮುಂದುವರೆಯಲಿದೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ