ನೀರವ್ ಮೋದಿ ಗಡಿಪಾರು ಪಕ್ಕಾ? ಲಂಡನ್ ಹೈಕೋರ್ಟ್ನಲ್ಲಿ ನೀರವ್ ಅರ್ಜಿ ವಜಾ
Team Udayavani, Nov 10, 2022, 6:55 AM IST
ಲಂಡನ್: ಭಾರತದ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಗಡೀಪಾರಿಗೆ ಸಿದ್ಧತೆ ಶುರುವಾಗಿದೆ.
ಒಂದು ವೇಳೆ ಭಾರತಕ್ಕೆ ಗಡೀಪಾರಾದರೆ ಮಾನಸಿಕ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳಬಹುದು. ಹೀಗಾಗಿ ಗಡೀಪಾರು ಆದೇಶ ರದ್ದು ಮಾಡಿ ಎಂದು ನೀರವ್ ಮೋದಿ ಲಂಡನ್ನ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದ. ಇದನ್ನು ತಳ್ಳಿಹಾಕಿರುವ ಹೈಕೋರ್ಟ್ ಹವಾಲಾ ಮತ್ತು ಹಣಕಾಸಿನ ಅಕ್ರಮ ಮಾಡಿದವರಿಗೆ ವಿನಾಯಿತಿಯ ನಿಯಮ ಅನ್ವಯವಾಗುವುದಿಲ್ಲ ಎಂದು ಹೇಳಿದೆ.
ಈ ಹಿಂದೆ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ನೀರವ್ ಮೋದಿ ಗಡಿಪಾರಿಗೆ ಆದೇಶ ನೀಡಿತ್ತು. ಇದನ್ನು ಆತ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದ. 2019ರಿಂದಲೂ ಈತ ವೆಸ್ಟ್ಮಿನಿಸ್ಟರ್ನಲ್ಲಿನ ಜೈಲಿನಲ್ಲಿಯೇ ಇದ್ದಾನೆ. ಆಗಿನಿಂದಲೂ ಈತನ ಮಾನಸಿಕ ಸ್ಥಿತಿಯನ್ನು ಅಧ್ಯಯನ ಮಾಡಿಕೊಂಡು ಬರಲಾಗಿದ್ದು, ಮಾನಸಿಕವಾಗಿ ಚೆನ್ನಾಗಿದ್ದಾನೆ. ಅಲ್ಲದೆ ಭಾರತವೂ ಗಡಿಪಾರಿನ ಅನಂತರ ಜೈಲಿನಲ್ಲಿ ಉತ್ತಮವಾಗಿ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದೆ. ಇದನ್ನು ನಾವು ತಳ್ಳಿಹಾಕಲಾಗದು ಎಂದಿದೆ.
ಸದ್ಯ ಲಂಡನ್ನಲ್ಲಿ ಕೋರ್ಟ್ಗಳ ಬಾಗಿಲು ಮುಚ್ಚಿದಂತಾಗಿದ್ದು, ಇನ್ನು ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ನಲ್ಲಿ ಈತ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿ ತೀರ್ಮಾನವಾದ ಮೇಲೆ ಭಾರತಕ್ಕೆ ಗಡೀಪಾರು ಪ್ರಕ್ರಿಯೆ ಆರಂಭವಾಗುತ್ತದೆ.