ಕಟಪಾಡಿ: ಸ್ಕೂಟಿಗೆ ಟಿಪ್ಪರ್ ಢಿಕ್ಕಿ; ಸಹ ಸವಾರ ಸಾವು
Team Udayavani, Dec 2, 2022, 11:26 PM IST
ಕಾಪು: ಉದ್ಯಾವರ ದಿಂದ ಉಚ್ಚಿಲಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಟಿಪ್ಪರ್ ಢಿಕ್ಕಿಯಾಗಿ ಸಹ ಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯ ಗೊಂಡ ಘಟನೆ ರಾ.ಹೆ. 66ರ ಕಟಪಾಡಿ ಜಂಕ್ಷನ್ ಬಳಿ ಶುಕ್ರವಾರ ಸಂಭವಿಸಿದೆ.
ಉದ್ಯಾವರ ಕೇದಾರ್ ನಿವಾಸಿ ಸುಶಿಕ್ಷಿತ್ ಭಂಡಾರಿ (20) ಮೃತಪಟ್ಟಿದ್ದು, ಸವಾರ ಜಯದೀಪ್ ಗಂಭೀರ ಗಾಯಗೊಂಡಿದ್ದಾರೆ.
ಕ್ಯಾಟರಿಂಗ್ನಲ್ಲಿ ಬಡಿಸಲೆಂದು ಸ್ನೇಹಿತನ ಜತೆಗೆ ಸ್ಕೂಟಿಯಲ್ಲಿ ಉಚ್ಚಿಲಕ್ಕೆ ತೆರಳುತ್ತಿದ್ದ ಅವರು ಕಟಪಾಡಿ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ವೇಳೆ ಕಟಪಾಡಿಯಿಂದ ಶಿರ್ವದತ್ತ ತೆರಳುತ್ತಿದ್ದ ಟಿಪ್ಪರ್ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಟಿಪ್ಪರ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಶಿಕ್ಷಿತ್ ಭಂಡಾರಿ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಜಯದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಕೈಕ ಪುತ್ರ
ಉದ್ಯಾವರ ಪೇಟೆಯಲ್ಲಿ ಸೆಲೂನ್ ಅಂಗಡಿ ಹೊಂದಿರುವ ಶಿವಣ್ಣ ಭಂಡಾರಿ ಮತ್ತು ಸುಜಯಾ ಭಂಡಾರಿ ದಂಪತಿಯ ಏಕೈಕ ಪುತ್ರನಾಗಿದ್ದ ಸುಶಿಕ್ಷತ್, ಪದವಿ ಶಿಕ್ಷಣ ಮುಗಿಸಿ ಕೆಲಸದ ಹುಡು ಕಾಟದಲ್ಲಿದ್ದ. ಮನೆಯಲ್ಲಿ ಇದ್ದೊಬ್ಬ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಹೇಳತೀರದು.