ಕುಣಿಗಲ್: ಪ್ರತ್ಯೇಕ ಘಟನೆ; ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಇಬ್ಬರು ಸಾವು
Team Udayavani, Dec 13, 2022, 5:57 PM IST
ಕುಣಿಗಲ್: ತಾಲೂಕಿನ ಅಮೃತೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ತಾಲೂಕಿನ ಅಮೃತೂರು ಪೊಲೀಸ್ ಠಾಣಾ ಶರಹದ್ದೀನ ತಿಮ್ಮೇಗೌಡನಪಾಳ್ಯ ಗ್ರಾಮದ ಚಂದ್ರಮ್ಮ (28) ಎಂಬ ಮಹಿಳೆ ಎಂದಿನಂತೆ ಹಸು ಮೇಯಿಸಲು ಬೆಳಗ್ಗೆ 10 ಗಂಟೆಯ ಸಮಯದಲ್ಲಿ ನಾಗಿನಿ ನದಿ ಬಳಿ ಹೊಗಿದ್ದರು. ಆದರೆ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ಇದ್ದಕ್ಕಿದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ನದಿಯ ಪಕ್ಕದಲ್ಲೇ ಹಸು ಮೇಯಿಸುತ್ತಿದ್ದ ಚಂದ್ರಮ್ಮ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಗ್ರಾಮಸ್ಥರು ಅಗ್ನಶಾಮಕ ದಳ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಶವಕ್ಕಾಗಿ ಶೋಧ ಶೋಧ ನಡೆಸಿದ್ದು, ಸ್ವಲ್ಪ ದೂರದಲ್ಲೇ ಶವ ಪತ್ತೆಯಾಗಿದೆ.
ಮತ್ತೊಂದು ಘಟನೆಯಲ್ಲಿ ಮೂಲತಃ ತಾಲೂಕಿನ ಕುಂಬಾರಪಾಳ್ಯ ಗ್ರಾಮದ ಹಾಲಿ ಬೆಂಗಳೂರು ವಾಸಿ ರವಿಕುಮಾರ್ (25) ಅಮೃಯೂರು ಹೋಬಳಿ ಕೊಡಗೇಹಳ್ಳಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಆದರೆ ಸಾವಿಗೆ ಕಾರಣ ತಿಳಿದು ಬಂದಿಲ್ಲ.ಈ ಎರಡು ಪ್ರಕರಣವನ್ನು ಅಮೃತೂರು ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.