ಬಿಜೆಪಿ – ಕಾಂಗ್ರೆಸ್ ನಡುವೆ ಟೆಂಡರ್ ಗಲಾಟೆ
Team Udayavani, Feb 16, 2023, 7:23 AM IST
ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳಲ್ಲಿ ಆರೋಪ-ಪ್ರತ್ಯಾರೋಪ ಜೋರಾಗಿದೆ. ಪ್ರಮುಖ ಇಲಾಖೆಗಳಲ್ಲಿ ಟೆಂಡರ್ ಮೊತ್ತ ದ್ವಿಗುಣಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಸಿಎಂ, ದಾಖಲೆಗಳಿದ್ದರೆ ಸದನದಲ್ಲಿ ಮಾತನಾಡಿ ಎಂದು ಸವಾಲೆಸೆದಿದ್ದಾರೆ.
ಟೆಂಡರ್ ಮೊತ್ತ ದುಪ್ಪಟ್ಟು
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುಜೇìವಾಲ ಅವರು ಸರಕಾರದ ವಿರುದ್ಧ ಟೆಂಡರ್ ಬಾಂಬ್ ಸಿಡಿಸಿದ್ದಾರೆ. ಲೋಕೋಪಯೋಗಿ, ಗ್ರಾಮೀಣಾಭಿ ವೃದ್ಧಿ, ಸಣ್ಣ ನಿರಾವರಿ, ಇಂಧನ ಸಹಿತ ಎಲ್ಲ ಇಲಾಖೆಗಳ ಟೆಂಡರ್ ಮೊತ್ತ 500 ಕೋ. ರೂ. ಇದ್ದುದನ್ನು 1,000 ಕೋ. ರೂ.ಗೆ ಏರಿಸಿ, ತರಾತುರಿಯಲ್ಲಿ ಅಂತಿಮಗೊಳಿಸಿ ಹಣ ವಸೂಲು
ಮಾಡಲಾಗುತ್ತದೆ. ಇದಕ್ಕೆ ದಾಖಲೆ ಗಳಿವೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಕೆಲವು ಟೆಂಡರ್ಗಳು ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದರೆ, ಉಳಿದವು ಆಗಿಲ್ಲ ಎಂದು ಆರೋಪಿಸಿದರು.
ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಇತ್ತೀಚೆಗಿನ 6 ತಿಂಗಳುಗಳಿಂದ ನೀಡಲಾಗಿರುವ ಅಕ್ರಮ ಟೆಂಡರ್ಗಳನ್ನು ರದ್ದು ಮಾಡಿ ತನಿಖೆ ನಡೆಸುತ್ತೇವೆ. ಬೆಂಗಳೂರು ನಗರದಲ್ಲಿ ಯಾವುದೇ ಕೆಲಸ ಆಗಬೇಕಾದರೂ ಸಿಎಂ ಕಚೇರಿಯಲ್ಲಿ ಡೀಲ್ ಆಗುತ್ತಿವೆ. ಅಲ್ಲಿರುವ ನಿರ್ದಿಷ್ಟ ವ್ಯಕ್ತಿಗೆ ಇಂತಿಷ್ಟು ಹಣ ನೀಡಿದರೆ ಮಾತ್ರ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಸದನಕ್ಕೆ ಬಂದು ಮಾತನಾಡಿ
ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹಿತ ಹಲವರು ಮುಗಿಬಿದ್ದಿದ್ದಾರೆ. ಕಾಂಗ್ರೆಸ್ನವರು ಮೊದಲು ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಕ್ಕಿ, ಎಸ್ಸಿ-ಎಸ್ಟಿ ಹಾಸ್ಟೆಲ್ಗಳಿಗೆ ಹಾಸಿಗೆ-ದಿಂಬು ಖರೀದಿಯಲ್ಲಿ, ನೀರಾವರಿ, ನೇಮಕಾತಿ, ಬಿಡಿಎ ದಲ್ಲಿ ರೀಡೂ, ಸೋಲಾರ್ ವಿದ್ಯುತ್ ವಿಚಾರದಲ್ಲೂ ಭ್ರಷ್ಟಾ ಚಾರ ನಡೆಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸಿಬಿ ಮುಂದೆ ಸಿದ್ದರಾಮಯ್ಯನವರದ್ದೂ ಸಹಿತ ಸುಮಾರು 60 ಕೇಸುಗಳಿದ್ದು, ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ಕಾಂಗ್ರೆಸ್ ಮಾಡಿದ್ದ ಶೇ. 40 ಕಮಿಷನ್ ಆರೋಪ ನಿರೂಪಿತವಾಗಿಲ್ಲ. ನ್ಯಾಯಾಲಯಕ್ಕೆ ದಾಖಲೆಗಳನ್ನೂ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹೊಡೆದರೆ ಯಾವುದೇ ಪ್ರಯೋಜನವಿಲ್ಲ. ಅಧಿಕಾರಕ್ಕೆ ಬಂದು ತನಿಖೆ ಮಾಡಿಸುತ್ತೇವೆ ಎಂದು ಧಮಕಿ ಹಾಕಿ ಗುತ್ತಿಗೆದಾರರನ್ನು ಬೆದರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಕಾಂಗ್ರೆಸಿಗರು ರಾಜ್ಯವನ್ನು ಸುಲಿಗೆ ಮಾಡಲಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.