ಮಹದಾಯಿ ಪ್ರಾಧಿಕಾರದ ಕಚೇರಿ ಸ್ಥಾಪಿಸಲು ಕೇಂದ್ರ ಒಪ್ಪಿಗೆ: ಪ್ರಮೋದ್ ಸಾವಂತ್
Team Udayavani, Feb 24, 2023, 6:01 PM IST
ಪಣಜಿ: ಮಹದಾಯಿ ಪ್ರವಾಸ ಪರಿಕಲ್ಪನೆಯಡಿ ಪಣಜಿಯಲ್ಲಿ ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ ಸಾವಂತ್- ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯನ್ನು ತೆರೆಯಲು ನಾವು ಯಾವಾಗಲೂ ಬೇಡಿಕೆ ಇಟ್ಟಿದ್ದೇವೆ, ಮಹದಾಯಿ ಪಯಣ ಪರಿಕಲ್ಪನೆಯಡಿ ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿ ತೆರೆಯಲು ಒಪ್ಪಿಗೆ ನೀಡಿದ ಪ್ರಧಾನಿ ಮತ್ತು ಜಲವಿದ್ಯುತ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಣಕುಂಬಿಯಲ್ಲಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟಿನಿಂದ ಸ್ವಲ್ಪ ನೀರು ಹರಿಸಲಾಗುತ್ತಿದೆ, ಮಹಾದಾಯಿ ನೀರು ನಿರ್ವಹಣಾ ಪ್ರಾಧಿಕಾರವು ತೆಗೆದುಕೊಳ್ಳುವ ನಿರ್ಧಾರವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ. ವಿರೋಧ ಪಕ್ಷದವರ ಕೆಲಸ ಟೀಕೆ ಮಾಡುವುದು, ಗೋವಾದ ಹಿತಾಸಕ್ತಿ ಕಾಪಾಡುವುದು ನನ್ನ ಕೆಲಸ, ಅದನ್ನು ಮಾಡುತ್ತಿದ್ದೇನೆ, ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ನೀಡಿರುವ ನೀರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ಇದು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ತಿಳುವಳಿಕೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕೇಂದ್ರದ ಈ ನಿರ್ಧಾರದಿಂದ ಮೂರು ರಾಜ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಜಲಸಂಪನ್ಮೂಲಗಳ ಸಮರ್ಪಕ ಬಳಕೆಯಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ವ್ಯಕ್ತಪಡಿಸಿದರು.