ರಾಣಿಬೆನ್ನೂರಿನಲ್ಲೇ ಸ್ಪರ್ಧೆ ಸಾವಿರ ಪಟ್ಟು ಖಚಿತ: ಶಂಕರ್
Team Udayavani, Mar 19, 2023, 6:20 AM IST
ರಾಣಿಬೆನ್ನೂರು: ಮುಂಬರುವ ವಿಧಾನಸಭಾ ಚುನಾವಣೆಗೆ ರಾಣಿಬೆನ್ನೂರು ಕ್ಷೇತ್ರದಿಂದ ಸ್ಪ ರ್ಧಿಸುವುದು ಖಚಿತ. ಇದರಲ್ಲಿ ಅನುಮಾನವೇ ಇಲ್ಲ. ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾವುದಕ್ಕೂ ಕಾದು ನೋಡಿ. ಸ್ಪರ್ಧೆ ಮಾಡುವುದಂತೂ ಸಾವಿರ ಪಟ್ಟು ಖಚಿತ ಎಂದು ಸ್ಪಷ್ಟಪಡಿಸಿದರು.
ನನ್ನ ಮನೆ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ರಾಜಕೀಯ ಪ್ರೇರಿತ. ಬಿಜೆಪಿಯ ಸಿ.ಟಿ. ರವಿ, ಸಚಿವ ಆರ್. ಅಶ್ವತ್ಥನಾರಾಯಣ ಸೇರಿ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಮತದಾರರಿಗೆ ವಿವಿಧ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಮನೆ ಮೇಲೇಕೆ ದಾಳಿ ಮಾಡಿದರೆಂದು ಗೊತ್ತಾಗುತ್ತಿಲ್ಲ ಎಂದರು.
ನನ್ನ ಮನೆಯಲ್ಲಿ ದಾಳಿ ಸಂದರ್ಭ ದೊರೆತ ಶಾಲಾ ಬ್ಯಾಗ್, ಸೀರೆ ಮತ್ತಿತರ ವಸ್ತುಗಳಿಗೆ ಜಿಎಸ್ಟಿ ಸಹಿತ ಬಿಲ್ಲುಗಳಿವೆ. ಅಗತ್ಯ ದಾಖಲೆಗಳಿವೆ. ಎಲ್ಲವನ್ನೂ ಒದಗಿಸಿರುವೆ. ಹಾಗಾಗಿ ಆತಂಕ, ಭಯಪಡುವ, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಿಂದೆ ಬಡವರ ಸೇವೆ ಮಾಡಿದ್ದೇನೆ. ಈಗ, ಮುಂದೆಯೂ ಸಹ ಬಡವರ ಸೇವೆ ಮಾಡುತ್ತೇನೆ. ಅಗತ್ಯ ವಸ್ತುಗಳನ್ನು ದಾನವಾಗಿ ನೀಡುತ್ತೇನೆ ಎಂದು ಹೇಳಿದರು.